ದೇಶವನ್ನು ಗುಲಾಮಗಿರಿಗೆ ತಳ್ಳಿದವರ ಜತೆ ಒಪ್ಪಂದಕ್ಕಿಂತ ಜೈಲುವಾಸ ಒಳ್ಳೆಯದು : ಇಮ್ರಾನ್ ಖಾನ್
ಇಮ್ರಾನ್ಖಾನ್ | Photo: PTI
ಇಸ್ಲಮಾಬಾದ್: ದೇಶವನ್ನು ಗುಲಾಮಗಿರಿಗೆ ತಳ್ಳಿದವರ ಜತೆ ಒಪ್ಪಂದದ ಸಾಧ್ಯತೆಯೇ ಇಲ್ಲ. ಅಂತವರ ಜತೆ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಇನ್ನೂ 9 ವರ್ಷ ಬೇಕಾದರೆ ಜೈಲಿನಲ್ಲೇ ಕಳೆಯಲು ಸಿದ್ಧ ಎಂದು ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಸ್ಥಾಪಕ ಇಮ್ರಾನ್ಖಾನ್ ಹೇಳಿದ್ದಾರೆ.
ಪಿಟಿಐ ಪಕ್ಷದ 28ನೇ ಸಂಸ್ಥಾಪನಾ ದಿನಾಚರಣೆಯ ಹಿನ್ನೆಲೆಯಲ್ಲಿ ಜೈಲಿನಿಂದಲೇ ಸಂದೇಶ ರವಾನಿಸಿರುವ ಇಮ್ರಾನ್ `ದೇಶದ ಮೇಲೆ ಅತ್ಯಂತ ಕೆಟ್ಟ ಸರ್ವಾಧಿಕಾರವನ್ನು ಹೇರಲಾಗಿದೆ. ಇದು ಆರ್ಥಿಕತೆ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ವಿನಾಶಕ್ಕೆ ಮೂಲಾಧಾರವಾಗಲಿದೆ. ದೇಶವು ವಿನಾಶದತ್ತ ಸಾಗುವುದನ್ನು ತಡೆಯುವಲ್ಲಿ ಪ್ರತೀ ವ್ಯಕ್ತಿಯೂ ತನ್ನ ಪಾತ್ರವನ್ನು ನಿರ್ವಹಿಸಬೇಕು ' ಎಂದರು. ತನ್ನ ವಿರುದ್ಧ ದಾಖಲಿಸಿರುವ ನಕಲಿ ಪ್ರಕರಣಗಳಿಂದಾಗಿ ಕಳೆದ 9 ತಿಂಗಳಿಂದ ಜೈಲಿನಲ್ಲಿದ್ದೇನೆ. ಆದರೆ ದೇಶದ ಹಿತಾಸಕ್ತಿಯ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ದೇಶವನ್ನು ಗುಲಾಮಗಿರಿಗೆ ತಳ್ಳಿದವರ ಜತೆ ರಾಜಿ ಮಾಡಿಕೊಳ್ಳುವುದಕ್ಕಿಂತ ಇನ್ನೂ 9 ವರ್ಷ ಜೈಲಿನಲ್ಲಿಯೇ ಇರಲು ಬಯಸುತ್ತೇನೆ ' ಎಂದು ಹೇಳಿದ್ದಾರೆ.
ಈ ಮಧ್ಯೆ, ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ ಹಾಗೂ ನವಾಝ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷದ ಮೈತ್ರಿ ಸರಕಾರ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು ಪಿಟಿಐ ಮುಖಂಡ ಶೆಹರ್ಯಾರ್ ಅಫ್ರಿದಿ ಆರೋಪಿಸಿದ್ದಾರೆ. ಲಾಹೋರ್ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು ` ದೇಶದ ಭದ್ರತೆಗೆ ಆದ್ಯತೆ ನೀಡುವುದು ಈಗಿನ ಅಗತ್ಯವಾಗಿರುವುದರಿಂದ ಪಿಪಿಪಿ, ಪಿಎಂಎಲ್-ಎನ್ ಹೊರತುಪಡಿಸಿ, ಸೇನಾ ಮುಖ್ಯಸ್ಥರು, ಐಎಸ್ಐ ಮುಖ್ಯಸ್ಥರು ಹಾಗೂ ಸೇನೆಯೊಂದಿಗೆ ಮಾತುಕತೆಗೆ ಸಿದ್ಧವಿದ್ದೇವೆ. ದೇಶಕ್ಕೆ ಇಮ್ರಾನ್ಖಾನ್ ಅಗತ್ಯವಿರುವುದರಿಂದ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಸೇನಾ ಮುಖ್ಯಸ್ಥರ ಜತೆ ಮಾತುಕತೆ ನಡೆಸಲಿದ್ದೇವೆ' ಎಂದರು.