ಉಡುಪಿ-ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣ ಲೈನ್| ಪರ್ಯಾಯ ಮಾರ್ಗ ಕಂಡು ಹಿಡಿಯಲು ಸಹಾಯಕ ಆಯುಕ್ತರಿಗೆ ಮನವಿ
ಮಂಗಳೂರು: ರಾಜ್ಯ ರೈತ ಸಂಘ ಹಾಗೂ ಉಡುಪಿ-ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯಿಂದ ಮಂಗಳವಾರ ಸಹಾಯಕ ಆಯುಕ್ತ ಹರ್ಷ ವರ್ಧನ್ರಿಗೆ ಮನವಿ ನೀಡಲಾಯಿತು.
ವಿದ್ಯುತ್ ಮಾರ್ಗ ಸುಮಾರು 40ಕ್ಕೂ ಅಧಿಕ ಬಡವರ ಮನೆಯ ಮೇಲೆ ಹಾದುಹೋಗುವ ಸಂಭವವಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದೆ ಕುಟುಂಬ ಬೀದಿಗೆ ಬೀಳುವ ಸಾಧ್ಯತೆಯಿದೆ. ವಿದ್ಯುತ್ ಮಾರ್ಗದಿಂದ ಹೊರಸೂಸುವ ಇಲೆಕ್ಟ್ರೋಮ್ಯಾ ಗ್ನೇಟಿಕ್ ಪವರ್ನಿಂದ ಸುಮಾರು 2 ಕಿ.ಮಿ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಬಗ್ಗೆ ತಮಿಳುನಾಡು ಭಾಗದಲ್ಲಿ ವೈಜ್ಞಾನಿಕವಾಗಿ ಕಂಡುಕೊಂಡಿದೆ. ಇದೀಗ ಇಲ್ಲಿ ಕಾನೂನಿನಲ್ಲಿ ಮಾರ್ಗ ಬದಲಾವಣೆಯ ಅವಕಾಶವನ್ನು ನೀಡಲಾಗಿದ್ದು, ಜನರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಂಡು ಹಿಡಿಯಲು ಈ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಬೇಕೆಂಬ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಸಂತ್ರಸ್ತ ರೈತ ಶ್ಯಾಮ್ ಪ್ರಸಾದ್ ವನಭೋಜನ ಮತ್ತಿತರರು ಉಪಸ್ಥಿತರಿದ್ದರು.