ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಸೀಸನ್-9 ಉದ್ಘಾಟನೆ
ಮಂಗಳೂರು: ಪಿಲಿ ನಲಿಕೆ ಪ್ರತಿಷ್ಠಾನ ಹಾಗೂ ನಮ್ಮಟಿವಿ ಸಹಯೋಗದಲ್ಲಿ ಪಿಲಿನಲಿಕೆ ಸೀಸನ್ 9 ಉದ್ಘಾಟನಾ ಕಾರ್ಯಕ್ರಮ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಕಟೀಲು ಕ್ಷೇತ್ರದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಮಾತಾಡಿ ಶುಭ ಹಾರೈಸಿದರು.ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಿವಂ ದುಬೆ ಭಾಗವಹಿಸಿ ಶುಭ ಹಾರೈಸಿದರು.
ಮಾರ್ಸ್ಕ್ ಸಂಸ್ಥೆ ಸಿಇಓ ಗೌತಮ್ ಶೆಟ್ಟಿ ಮಾತಾಡಿ, ”ಹಿಂದಿನ ಕಾಲದಲ್ಲಿ ಬಲ ಇದ್ದವರು ಮಾತ್ರ ನಾಯಕರಾಗುತ್ತಿದ್ದರು ಆದರೆ ಇಂದು ಬುದ್ಧಿ ಇರುವವರು ನಾಯಕರಾಗುತ್ತಿದ್ದಾರೆ. ಪಿಲಿ ನಲಿಕೆ ಆಯೋಜಕರಾದ ಮಿಥುನ್ ರೈ ಅವರು ಬಲ, ಬುದ್ಧಿ ಮತ್ತು ಹೃದಯವನ್ನು ಹೊಂದಿರುವ ನಾಯಕರಾಗಿದ್ದಾರೆ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ“ ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮಾತಾಡಿ, ”ಪಿಲಿ ನಲಿಕೆಗೆ ದೇಶ ವಿದೇಶಗಳಲ್ಲಿ ಅಭಿಮಾನಿ ಗಳಿದ್ದಾರೆ. ಇದೇ ಕಾರಣಕ್ಕೆ ವಿದೇಶಗಳಲ್ಲೂ ನಮ್ಮ ಸಂಸ್ಕೃತಿ ಹಬ್ಬಿದೆ. ಹುಲಿ ವೇಷಕ್ಕೆ ವೇದಿಕೆ ಸೃಷ್ಟಿಸಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು“ ಎಂದರು.
ತುಳುವಲ್ಲಿ ಮಾತು ಮುಂದುವರಿಸಿದ ಎಸಿಪಿ ಗೀತಾ ಕುಲಕರ್ಣಿ ಅವರು, ”ಮಿಥುನ್ ರೈ ನೇತೃತ್ವದ ಪಿಲಿ ನಲಿಕೆ ನೂರು ಸೀಸನ್ ಗಳನ್ನೂ ದಾಟಿ ಮುಂದುವರಿಯಲಿ. ತುಳುನಾಡಿನ ಇಂತಹ ಕಾರ್ಯಕ್ರಮಗಳು ಯಶಸ್ಸು ಕಾಣಲಿ“ ಎಂದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವ, ನಮ್ಮ ಟಿವಿ ಸಿಇಓ ಶಿವಚರಣ್ ಶೆಟ್ಟಿ, ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಎಂ.ಮಿಥುನ್ ರೈ, ವೆಂಕಟೇಶ್ ಭಟ್ ಪಾವಂಜೆ, ಕೆ.ಕೆ. ಪೇಜಾವರ, ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಡಾ.ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.