ಡಿ.6ರಿಂದ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ
ಉಳ್ಳಾಲ: ಶಿಕ್ಷಣ, ಉದ್ಯೋಗ, ಕೃಷಿಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯ ಕೋಟಿ ನಗರ ಕೈರಂಗಳ ಆಯೋಜಿಸುವ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ-2024 ರ ಡಿ.6,7,8 ರಂದು ಕೈರಂಗಳ ಪುಣ್ಯ ಕೋಟಿನಗರದಲ್ಲಿ ನಡೆಯಲಿದ್ದು, ವಿಪ್ರೋ, ಲಿನೆವೋ, ಇನ್ಫೋಸಿಸ್ ಸೇರಿದಂತೆ ಪ್ರತಿಷ್ಠಿತ ಐಟಿ ಕಂಪೆನಿಗಳಿಗೆ ಆಹ್ವಾನಿಸಲಾಗಿದೆ.
ರಾಜ್ಯದಾದ್ಯಂತ ಉದ್ಯೋಗಾಕಾಂಕ್ಷಿಗಳು, ಕೃಷಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್ ಹೇಳಿದರು.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ , ಪಿಯುಸಿ ಹಾಗೂ ಪದವಿ ಬಳಿಕ ಮುಂದೇನು? ಅನ್ನುವ ಕುತೂಹಲದಲ್ಲಿ ವಿದ್ಯಾರ್ಥಿ ಸಮೂಹಕ್ಕಿದೆ. ರಾಜ್ಯದ ಅನೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಲವು ರೀತಿಗಳಲ್ಲಿ ಕೋರ್ಸುಗಳನ್ನು ಒದಗಿಸುತ್ತಿದೆ. ಅಂತಹ ಒಟ್ಟು 37 ಕಾಲೇಜುಗಳನ್ನು ಒಟ್ಟಾಗಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳ ಕೋರ್ಸುಗಳ ಪರಿಚಯದ ಶಿಕ್ಷಣ ಮೇಳ, ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಂಪೆನಿ ಗಳಿಗೆ ಆಹ್ವಾನಿಸಲಾಗಿದ್ದು, ಜೊತೆಗೆ ವಿಪ್ರೋ, ಲಿನೆವೋ, ಇನ್ಫೋಸಿಸ್ ನಂತಹ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿಕನೇ ದೇಶದ ಅನ್ನತಾದ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಬಲ್ಲಂತಹ ಯಂತ್ರೋಪಕರಣಗಳು, ಸಾವಯವ ಬಿತ್ತನೆ ಬೀಜಗಳು, ರಸಗೊಬ್ಬರಗಳು , ನಾಟಿಗೆ ಯೋಗ್ಯವಾದ ನರ್ಸರಿಗಳು ಹಾಗೂ ರಾಜ್ಯದ ವಿವಿಧ ಕಡೆ ಗಳಿಂದ ನರ್ಸರಿಯವರು ಭಾಗವಹಿಸುವ ಮೂಲಕ ನರ್ಸರಿ ಸಾಮ್ರಾಜ್ಯವನ್ನೇ ನಿರ್ಮಿಸುತ್ತಾರೆ. ಇದರ ನಡುವೆ ಆಟಗಳ ಪ್ರಪಂಚ, ಆಕರ್ಷಕ ದೋಣಿ ವಿಹಾರ, ಆಹಾರ ವಸ್ತುಗಳು, ತಿಂಡಿ ತಿನುಸುಗಳ ಮಳಿಗೆಗಳು ಸೇರಿದಂತೆ ಒಟ್ಟು 306 ಮಳಿಗೆಗಳು ಕೃಷಿ ಮೇಳದಲ್ಲಿ ಭಾಗಿಯಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ , ಗಂಗಾವತಿ ಪ್ರಾಣೇಶ್ ಅವರ ಹಾಸ್ಯ, ಶಿವಮೊಗ್ಗದ ತಂಡದಿಂದ ನೃತ್ಯ ಹೀಗೆ ರಾಜ್ಯಮಟ್ಟದ ತಂಡಗಳು ಮೂರು ದಿನಗಳ ಕಾಲ ಯಶಸ್ವಿ ಕಾರ್ಯಕ್ರಮಗಳನ್ನು ನೀಡಲಿದೆ.
ಎಲ್ಲಾ ಜನರಿಗೂ ಪ್ರಯೋಜನವಾಗುವಂತೆ ಮೇಳ ಆಯೋಜಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಉದ್ಯೋಗಪತಿಗಳು, ಉದ್ಯೋಗಾಕಾಂಕ್ಷಿಗಳು, ಕೃಷಿಕರ ಕೃಷಿ ಯಂತ್ರೋಪಕರಣಗಳ ತಯಾರಕರು, ಮಾರಾಟಗಾರರು, ಕೃಷಿಯುತ್ಪನ್ನಗಳ ಮಾರಾಟಗಾರರು ಒಂದೇ ಕಡೆ ಸೇರುವಂತೆ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮೇಳದ ಪ್ರಯೋಜನವನ್ನು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾವಂತ ನಿರುದ್ಯೋಗಿಗಳು, ಉದ್ಯೋಗಪತಿಗಳು, ಕೃಷಿಕರು ಪಡೆದುಕೊಳ್ಳ ಬೇಕು. ಸಂಸದ ಬ್ರಿಜೇಶ್ ಚೌಟ ಸೇರಿದಂತೆ ರಾಜ್ಯದ ವಿವಿಧ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಜಯರಾಮ ಶೆಟ್ಟಿ ಕಂಬ್ಳಪದವು, ನವೀನ್ ಪಾದಲ್ಪಾಡಿ, ವಿಶ್ವನಾಥ್ ಕಡ್ವಾಯಿ, ರಂಜಿತ್ ಮಿತ್ತಾವು, ಧೀರಜ್ ಚೇಳೂರು ಭಾಗವಹಿಸಿದ್ದರು.