ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣ: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?

ಮಂಗಳೂರು, ಮಾ.9: ನಿಗೂಢವಾಗಿ ನಾಪತ್ತೆಯಾಗಿ ಇದೀಗ ಪೊಲೀಸರ ಕೈಗೆ ಬಿದ್ದಿರುವ ವಿದ್ಯಾರ್ಥಿ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ದಿಗಂತ್ನನ್ನು ಬುಧವಾರ(ಮಾ.12) ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿಗಂತ್ ಪತ್ತೆಗಾಗಿ ಆತನ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಕಾರಣ ಆತನನ್ನು ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಆತನನ್ನು ಸಿಡಬ್ಲ್ಯುಸಿ ಬಾಲಕರ ಬಾಲ ಮಂದಿರಕ್ಕೆ ಸೇರಿಸಲಾಗಿದೆ ಎಂದರು.
ದ್ವಿತೀಯ ಪಿಯುಸಿ ಪಿಸಿಎಂಬಿ ಪರೀಕ್ಷೆಗೆ ಸರಿಯಾಗಿ ತಯಾರಿ ಮಾಡದ ಕಾರಣ ಭಯಭೀತನಾಗಿ ಮನೆ ಬಿಟ್ಟು ಹೋಗಿರುವುದಾಗಿ ದಿಗಂತ್ ತನಿಖೆಯ ವೇಳೆ ಮಾಹಿತಿ ನೀಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ದಿಗಂತ್ ಫೆ.25ರಂದು ಮಂಗಳೂರಿನಿಂದ ಮನೆಗೆ ಬಂದು 500 ರೂ. ತೆಗೆದುಕೊಂಡು ಅಲ್ಲಿಂದ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಅರ್ಕುಳಕ್ಕೆ ತೆರಳಿ, ಅಲ್ಲಿಂದ ಬೈಕ್ ಹಿಡಿದು ಮಂಗಳೂರು ಖಾಸಗಿ ಬಸ್ ನಿಲ್ದಾಣ ತಲುಪಿದ್ದನು. ಬಳಿಕ ಶಿವಮೊಗ್ಗ ಬಸ್ ಹತ್ತಿದ್ದಾನೆ. ಶಿವಮೊಗ್ಗದಿಂದ ರೈಲಿನಲ್ಲಿ ಮೈಸೂರಿಗೆ ತೆರಳಿ, ಅಲ್ಲಿಂದ ಕೆಂಗೇರಿಗೆ ಹೋಗಿ ಅಲ್ಲಿ ರೆಸಾರ್ಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದನು. ಅಲ್ಲಿ ಸ್ವಲ್ಪ ಹಣ ಗಳಿಸಿ ಅಲ್ಲಿಂದ ವಾಪಸ್ ಅದೇ ರೂಟ್ ನಲ್ಲಿ ಉಡುಪಿಗೆ ಆಗಮಿಸಿದ್ದನು. ಉಡುಪಿಯಲ್ಲಿ ಅಂಗಡಿಯೊಂದರಿಂದ ಬಟ್ಟೆ ಖರೀದಿಸಿ ಹಣವಿಲ್ಲದ ಕಾರಣ ಅಲ್ಲಿಂದ ಓಡಲು ಯತ್ನಿಸಿದ್ದಾನೆ. ಆಗ ಆತನನ್ನು ಹಿಡಿದು ವಿಚಾರಿಸಿದಾಗ ಕಾಣೆಯಾಗಿರುವ ವಿದ್ಯಾರ್ಥಿ ದಿಗಂತ್ ಎಂಬ ವಿಚಾರ ಸ್ಥಳೀಯರಿಗೆ ಗೊತ್ತಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಮಂಗಳೂರಿನ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ಎಸ್ಪಿ ಯತೀಶ್ ತಿಳಿಸಿದರು.
ದಿಗಂತ್ ಮನೆಯಿಂದ ಹೊರಟು ರೈಲು ಹಳಿ ತಲುಪಿದಾಗ ಅಲ್ಲಿ ತನ್ನ ಮೊಬೈಲ್ ಫೋನ್, ಚಪ್ಪಲಿಯನ್ನು ತೊರೆದಿದ್ದಾನೆ. ಹಾಗೂ ಪತ್ರವೊಂದನ್ನು ಎಸೆದು ಹೋಗಿದ್ದಾನೆ. ಈ ಮಧ್ಯೆ ಕಾಲಿನ ಹಿಮ್ಮಡಿಗೆ ಆಗಿದ್ದ ಗಾಯದಿಂದ ಒಸರುತ್ತಿದ್ದ ರಕ್ತವನ್ನು ಚಪ್ಪಲಿಗೆ ಒರೆಸಿದ್ದಾಗಿ ದಿಗಂತ್ ತಿಳಿಸಿದ್ದಾನೆ ಎಸ್ಪಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಡಿಷನಲ್ ಎಸ್ಪಿ ರಾಜೇಂದ್ರ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಬಂಟ್ವಾಳ ಗ್ರಾಮಾಂತರ ಸಿಪಿಐ ಶಿವಕುಮಾರ್ ಉಪಸ್ಥಿತರಿದ್ದರು.