ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ; ಪ್ರಕರಣ ದಾಖಲು
ಮಂಗಳೂರು, ಡಿ.8: ಮೂಡುಬಿದಿರೆಯ ‘ಅಮರಶ್ರೀ’ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ದಿ. ಅಮರನಾಥ ಶೆಟ್ಟಿ ಹೆಸರಿನಲ್ಲಿ ನಕಲಿ ದಾಖಲೆ ತಯಾರಿಸಿ ವಂಚಿಸಿರುವ ಬಗ್ಗೆ ಅವರ ಪುತ್ರಿ, ಅಮರಶ್ರೀ ಚಿತ್ರಮಂದಿರದ ಮಾಲಕಿ ಡಾ. ಅಮರಶ್ರೀ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಅಮರನಾಥ ಶೆಟ್ಟಿ ಚಿತ್ರಮಂದಿರದ ಮ್ಯಾನೇಜ್ಮೆಂಟ್ ನೋಡಿಕೊಳ್ಳಲು ಕಾರ್ಕಳದ ಜೆರಾಲ್ಡ್ ಕುಟಿನ್ಹೋ ಅವರನ್ನು ಮ್ಯಾನೇಜರ್ ಆಗಿ ನೇಮಿಸಿದ್ದರು. 2020ರ ಜ.27ರಂದು ಮೃತಪಟ್ಟಿದ್ದ ತನ್ನ ತಂದೆಯ ಹೆಸರಿನಲ್ಲಿದ್ದ ಚಿತ್ರಮಂದಿರವನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಹಾಗು ಚಿತ್ರಮಂದಿರದ ದುರಸ್ತಿ ಕೆಲಸ ಮಾಡಿಸಲು 2023ರ ನವೆಂಬರ್ನಲ್ಲಿ ಸಂಬಂಧಿಸಿದ ಇಲಾಖೆಗೆ ಹೋದಾಗ ಆರೋಪಿ ಜೆರಾಲ್ಡ್ ಕುಟಿನ್ಹೋ ಮಾಜಿ ಸಚಿವ ಅಮರನಾಥ ಶೆಟ್ಟಿಯ ಹೆಸರಿನಲ್ಲಿ ನಕಲಿ ಸಿನೆಮಾ ಪ್ರದರ್ಶನದ ಪರವಾನಿಗೆ ಪಡೆದು, ವಂಚಿಸುವ ಉದ್ದೇಶದಿಂದ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳಲು 2022ರ ನ.7ರಂದು ನಕಲಿ ಕೋರಿಕೆ ಪತ್ರ ತಯಾರಿಸಿ ಜಿಲ್ಲಾ ಅಗ್ನಿಶಾಮಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರಿಗೆ ನೀಡಿ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದಾನೆ ಎಂದು ಅಮರಶ್ರೀ ಅಮರನಾಥ ಶೆಟ್ಟಿ ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.