ಮಂಗಳೂರು: ಬ್ಲಡ್ ಡೋನರ್ಸ್ ರಕ್ತದಾನ ಶಿಬಿರ
ಮಂಗಳೂರು, ಸೆ.13: ಪ್ರತಿಯೊಬ್ಬರು ಇತರರ ನೆರವು, ದಾನದ ನಿರೀಕ್ಷೆಯ ಬದಲು ಸ್ವತಃ ನಾವೇ ಇತರರಿಗೆ ದಾನ, ನೆರವು ನೀಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರು ಸ್ವತಃ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಬುಧವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬ್ಲಡ್ ಡೋನರ್ಸ್ನ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ. ತುರ್ತು ಸಂದರ್ಭ ಮಾತ್ರವಲ್ಲ ಇಂತಹ ಶಿಬಿರಗಳ ಮೂಲಕ ರಕ್ತದಾನ ಮಾಡಬೇಕಿದೆ ಎಂದರು.
ಎಸಿಪಿ ಮಹೇಶ್ ಕುಮಾರ್ ಮಾತನಾಡಿ ರಕ್ತದಾನ ಪುಣ್ಯದ ಕೆಲಸವಾಗಿದೆ. ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಾಗ ಪೊಲೀಸರು ಶಿಬಿರಕ್ಕೆ ಕಾಯದೆ ತಕ್ಷಣ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆಯಬೇಕು ಎಂದರು.
ಡಾ. ಅಣ್ಣಯ್ಯ ಕುಲಾಲ್ ಅಂಗಾಂಗ ದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ನವಾಝ್ ನರಿಂಗಾನ, ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಪೊಲೀಸ್ ಅಧಿಕಾರಿ ಗಳಾದ ಸೋಮಶೇಖರ್, ಭಾರತಿ, ನಾಗೇಶ್, ರಾಘವೇಂದ್ರ ಬೈಂದೂರು, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಉಪಸ್ಥಿತರಿದ್ದರು.