ಮಂಗಳೂರು: ಮೊಬೈಲ್ ಅಂಗಡಿ ಮಾಲಕನಿಗೆ ಗುಂಪಿನಿಂದ ಹಲ್ಲೆ; ಇಬ್ಬರ ಬಂಧನ
ಮಂಗಳೂರು: ನಗರದ ದುಬೈ ಮಾರ್ಕೆಟ್ನಲ್ಲಿ ಮೊಬೈಲ್ ರಿಪೇರಿ ವಿಚಾರದಲ್ಲಿ ಮೊಬೈಲ್ ಅಂಗಡಿ ಮಾಲಕನಿಗೆ ಗುಂಪೊಂದು ಮಂಗಳವಾರ ರಾತ್ರಿ ಥಳಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ಮಂಗಳೂರು ನಗರದ ಹೃದಯ ಭಾಗದ ಸೆಂಟ್ರಲ್ ಮಾರ್ಕೆಟ್ ಬಳಿ ದುಬೈ ಮಾರ್ಕೆಟ್ ಮಳಿಗೆ ಕಾರ್ಯಾಚರಿಸುತ್ತಿದೆ. ಮಂಗಳವಾರ ರಾತ್ರಿ ಗ್ರಾಹಕ ಓರ್ವ ಪವರ್ ಬ್ಯಾಂಕ್ ರಿಪೇರಿಗೆಂದು ಬಂದಿದ್ದು ರಿಪೇರಿ ಮಾಡಲು ಸೂಚಿಸಿದ್ದರು. ಅಂಗಡಿ ಮಾಲಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುವುದಿಲ್ಲ ಎಂದಿದ್ದು, ಈ ವೇಳೆ ಆತ ಸ್ಕ್ರೂ ಡ್ರೈವರ್ ಕೊಡು, ನಾನೇ ಸರಿ ಮಾಡುತ್ತೇನೆ ಎಂದಿದ್ದನು. ನಾವು ಬ್ಯುಸಿ ಇದ್ದೇವೆ ಎಂದಿದಕ್ಕೆ ಮಾತಿಗೆ ಮಾತು ಬೆಳೆದಿತ್ತು ಎಂದು ತಿಳಿದು ಬಂದಿದೆ.
ಈ ವೇಳೆ ಕೋಪಗೊಂಡ ಗ್ರಾಹಕ ಅಂಗಡಿ ಮಾಲಕನಿಗೆ ಹಲ್ಲೆ ಮಾಡಿದ್ದನು. ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಕ್ಕೆ ಕೋಪಗೊಂಡ ಗ್ರಾಹಕ ತನ್ನ ಗೆಳೆಯರ ಗುಂಪನ್ನು ಕರೆದು ಆತನಿಗೆ ಥಳಿಸಿದ ಘಟನೆ ನಡೆದಿತ್ತು. ಹಲ್ಲೆ ಮಾಡಿದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.