ಮಂಗಳೂರು: ವ್ಯಾಪಾರಿಗೆ 75 ಲಕ್ಷ ರೂ. ವಂಚನೆ; ದೂರು ದಾಖಲು
ಮಂಗಳೂರು, ಸೆ.30: ಕೃಷಿ ಉತ್ಪನ್ನಗಳ ವ್ಯಾಪಾರಿಯೊಬ್ಬರಿಗೆ ಇನ್ನೊಬ್ಬ ವ್ಯಾಪಾರಿ 75 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಅಬ್ದುಲ್ ರಹಿಮಾನ್ ಬಾವಾ ಎಂಬವರು ವಂಚನೆಗೊಳಗಾಗಿ ಹಣ ಕಳೆದುಕೊಂಡವರು. ಮಹಾರಾಷ್ಟ್ರದ ಸೋಲಾಪುರದ ಸಿದ್ದೇಶ್ವರ ಟ್ರೆಡರ್ಸ್ ನ ಕುಂಡಲಿಕ್ ಜುಂಬಾರ್ ಖಂಡಾಗಲೆ ಎಂಬವರು ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಜನವರಿ 2021ರಲ್ಲಿ ಅಬ್ದುಲ್ ರಹಿಮಾನ್ ಬಾವಾರಿಗೆ ಮಂಗಳೂರು ಮತ್ತು ಚೆನ್ನೈನಲ್ಲಿ ವ್ಯವಹಾರ ಹೊಂದಿರುವ ನೀರುಳ್ಳಿ ವ್ಯಾಪಾರಿ ಕುಂಡಲಿಕ್ ಜುಂಬಾರ್ ಖಂಡಾಗಲೆ ಪರಿಚಯವಾಗಿತ್ತು ಎನ್ನಲಾಗಿದೆ. ಆ ಬಳಿಕ ಇತರ ಕೃ ಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ ಆತ್ಮೀಯರಾಗಿದ್ದು, ನಂತರ ಆರೋಪಿ ಕುಂಡಲಿಕ್ ಜುಂಬಾರ್ ಖಂಡಾಗಲೆ ಅಬ್ದುಲ್ ರಹಿಮಾನ್ ಬಾವಾ ಅವರಿಗೆ ವಂಚಿಸುವ ಉದ್ದೇಶದಿಂದ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಆತನ ಮಾಲಿಕತ್ವದ ಸಿದ್ದೇಶ್ವರ ಟ್ರೇಡರ್ಸ್ನ ಬ್ಯಾಂಕ್ ಖಾತೆಗೆ ಬಾವಾರ ಬ್ಯಾಂಕ್ ಖಾತೆ ಯಿಂದ ವಿವಿಧ ದಿನಗಳಲ್ಲಿ ಹಣ ವರ್ಗಾಯಿಸಿಕೊಂಡು ನಂತರ ವಾಪಾಸು ನೀಡದೆ ವಂಚಿಸಿರುವುದಾಗಿದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.