ಮಂಗಳೂರು: ಸಾಮಾಜಿಕ ಕಾರ್ಯಕರ್ತ ಎಂ.ಜಿ.ಮುಹಮ್ಮದ್ ನಿಧನ
ಮಂಗಳೂರು : ಮೂಲತಃ ನಗರದ ಬೋಳಾರದ ಪ್ರಸಕ್ತ ಕಂಕನಾಡಿಯಲ್ಲಿ ವಾಸವಾಗಿದ್ದ ಸಾಮಾಜಿಕ ಕಾರ್ಯಕರ್ತ ಎಂ.ಜಿ. ಮುಹಮ್ಮದ್ (64) ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ , ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
2021ರ ಡಿಸೆಂಬರ್ನಲ್ಲಿ ನಗರ ಹೊರವಲಯದ ಅಡ್ಯಾರ್ ಕಣ್ಣೂರು ಬಳಿ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸ್ಕಿಡ್ಡಾಗಿ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಕೆಲ ತಿಂಗಳ ಕಾಲ ಕೋಮಾದಲ್ಲಿದ್ದ ಇವರು ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದರು. ಆದಾಗ್ಯೂ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಇವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ನಗರದ ಸ್ಟೇಟ್ಬ್ಯಾಂಕ್ ಬಳಿ ಬೇಕರಿ ಹೊಂದಿದ್ದ ಇವರು ಎಸ್ಕೆಎಸ್ಎಂ ದಅವಾ ಕಾರ್ಯದರ್ಶಿಯಾಗಿ ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅಸಹಾಯಕರಿಗೆ ವೈದ್ಯಕೀಯ ಸೇವೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿನ ಜೊತೆಗೆ ಮಯ್ಯತ್ ಪರಿಪಾಲನೆ, ರಕ್ತದಾನ ಇತ್ಯಾದಿ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದರು. ರಾಜಿ ಪಂಚಾಯತಿಗೆಯ ಮೂಲಕ ವಿವಾದ ಬಗೆಹರಿಸುವಲ್ಲಿಯೂ ನಿಸ್ಸೀಮರಾಗಿದ್ದರು.
ಮಂಗಳವಾರ ಬೆಳಗ್ಗೆ 10.30ಕ್ಕೆ ನಗರದ ಕಂಕನಾಡಿಯ ಸಲಫಿ ಸೆಂಟರ್ಗೆ ಮೃತದೇಹವನ್ನು ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.