ಕೂಳೂರು: ಯೆನೆಪೋಯ ಇನ್ಸ್ಟಿಟ್ಯೂಟ್ ವತಿಯಿಂದ ಇಫ್ತಾರ್ ಕೂಟ
ಸುರತ್ಕಲ್: ಪರಿಗಣಿಸಲಾದ ವಿಶ್ವವಿದ್ಯಾಲಯ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ನ ಅಂತಿಮ ವರ್ಷದ ವಿದ್ಯಾರ್ಥಿಗಳ ವತಿಯಿಂದ ಇಫ್ತಾರ್ ಮೀಟ್ 2024 ಕಾಲೇಜಿನ ಕೂಳೂರು ಕ್ಯಾಂಪಸ್ ನಲ್ಲಿ ಮಂಗಳವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಪಿ.ಎ. ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಝ್, ವ್ಯಕ್ತಿ ಮಳೆ ಬಿದ್ದಾಗ ಭೂಮಿ ಹಸನಾಗುವಂತೆ ರಮಝಾನ್ ಮನುಷ್ಯನನ್ನು ಉನ್ನತ ಕರ್ಮಗಳನ್ನು ಮಾಡಲು ಹಸನು ಗೊಳಿಸುತ್ತದೆ. ಸೃಷ್ಠಿ ಕರ್ತನನ್ನು ಹತ್ತಿರವಾಗಲು ರಮಝಾನ್ ಉತ್ತಮ ಸಮಯ ಎಂದರು.
ಮಕ್ಕಳು ಎಲ್ಲಿ, ಹೇಗೆ ಇದ್ದರೂ ಹೆತ್ತವರಿಗೆ ಕೃತಜ್ಞರಾಗಿರಬೇಕು. ಹೆತ್ತರ ಆಸೆ ಆಕಾಂಕ್ಷೆಗಳನ್ನು ಪೂರ್ತಿ ಮಾಡುವುದು ಮಕ್ಕಳಾದ ನಮ್ಮೆಲ್ಲರ ಕರ್ತವ್ಯವಾಗಿದ್ದು, ಅವರನ್ನು ಸಂತೋಷಪಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡೀನ್ ಮತ್ತು ಪ್ರಾಂಶುಪಾಲರಾದ ಡಾ. ಅರುಣ್ ಎ. ಭಗ್ವತ್ ಅವರು, ಸೌಹಾರ್ದ, ಸಹೋದರತೆ ಗೆ ಹೆಚ್ಚಿನ ಒತ್ತು ನೀಡಬೇಕು. ನಾಡು, ನುಡಿಯನ್ನು ಪ್ರೀತಿಸಬೇಕು. ಸಂಸ್ಕೃತಿ, ಸಂಸ್ಕಾರಗಳು ಅದುವೇ ನಮ್ಮ ಜೀವನವನ್ನು ಮುನ್ನಡೆಸುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥಗಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಟಾನಿ ಆಲ್ವರೀಸ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಕಣಚೂರು ಆರೋಗ್ಯ ವಿಭಾಗದ ವೈದ್ಯಾಧಿಕಾರಿ ಡಾ. ಜಮಾಲುದ್ದೀನ್, ಫ್ಯಾಕಲ್ಟಿ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ನ ಡೀನ್ ಮತ್ತು ಉಪ ಪ್ರಾಂಶುಪಾಲೆ ಡಾ. ಶರೀನ ಪಿ., ನಾರಾಯಣ ಸುಕುಮಾರ, ಜೀವನ್ ರಾಜ್ ಮೊದಲಾದವರು ಉಪಸ್ತಿತರಿದ್ದರು.