ಕಯ್ಯಾರ ಕಿಞ್ಞಣ್ಣ ರೈ ಅವರ ಜೀವನ, ಶಿಸ್ತು ಅನುಕರಣೀಯ: ಡಾ. ಪ್ರಸನ್ನ ರೈ
ಕೊಣಾಜೆ: ಬರಹ, ದುಡಿತ ಎರಡನ್ನೂ ಜೊತೆಜೊತೆಗೆ ಕೊಂಡೊಯ್ದ ಕಯ್ಯಾರ ಕಿಞ್ಞಣ್ಣ ರೈ ಅವರ ಜೀವನ, ಶಿಸ್ತು ಅನುಕರಣೀಯ. ಪ್ರಾಸಬದ್ಧವಾಗಿ ಹಾಡುತ್ತ ಬರೆಯುತ್ತಿದ್ದ ಕಯ್ಯಾರರು ಬರೆದುದನ್ನು ಮತ್ತೆ ತಿದ್ದುತ್ತಿರಲಿಲ್ಲ. ಅವರು ಮನೆಯವರಿಗೆ ಸೀಮಿತವಾದವರಲ್ಲ, ಸಾರ್ವಜನಿಕರಿಗೆ ಸಮರ್ಪಿತರಾದವರು ಎಂದು ಪೆರಡಾಲದ ಕವಿತಾ ಕುಟೀರದ ಕಾರ್ಯದರ್ಶಿ ಡಾ. ಪ್ರಸನ್ನ ರೈ ಹೇಳಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ. ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಕಯ್ಯಾರ ನೆನಪು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಸಿ. ಎಸ್. ಶಾಸ್ತ್ರಿಯವರು ಕಯ್ಯಾರರ ಶಿಶುಗೀತೆಗಳನ್ನು, ಬಾಲ್ಯದಲ್ಲೇ ಕಯ್ಯಾರರ ಕವನಗಳ ಪರಿಚಯ ಮಾಡಿಕೊಟ್ಟ ತಮ್ಮ ಶಾಲಾದಿನಗಳನ್ನು ನೆನಪಿಸಿಕೊಂಡರು.
ಡಾ. ಪ್ರೇರಣಾ ಹೆಗ್ಡೆ, ಕು. ಜೇನ್, ಕು. ಸೋನಾ, ಸುವೀಕ್ಷಾ ಭಂಡಾರಿ, ಅದಿತಿ, ಶ್ವೇತಾ ಮತ್ತು ವಿಪುಲ್ ಕಯ್ಯಾರರ ಕವನಗಳನ್ನು ಹಾಡಿದರು. ಅಮೇರಿಕಾದ ಬೋಸ್ಟನ್ ನಿಂದ ತುಳು ಭಾಷೆಯ ಪ್ರೀತಿಯಿಂದ ಬಂದಿರುವ ಸ್ಯಾಮುಯೆಲ್ ಡ್ರಾಗ್ಮೋರ್ ಮತ್ತು ಚಿರಶ್ರೀ ಕಯ್ಯಾರರ ಬರೆಹಗಳ ಕುರಿತಾಗಿ ಸಂಭಾಷಣೆಯೊಂದನ್ನು ಪ್ರಸ್ತುತಪಡಿಸಿದರು.
ಕಯ್ಯಾರರ ಅಳಿಯ ಶ್ರೀ ಭುವನಪ್ರಸಾದ್ ಹೆಗ್ಡೆ ವೇದಿಕೆಯಲ್ಲಿದ್ದರು. ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಸಾಯಿಗೀತಾ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ಮಹಾದೇವ್ ಕಾರ್ಯಕ್ರಮ ನಿರ್ವಹಿಸಿ ದರು. ಅನ್ಶ್ಯಾ ರೈ, ವರ್ಷಾ ಶೆಟ್ಟಿ ಮತ್ತು ಡಾ. ನೀತಾ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.