ʼಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತʼ ಅಭಿಯಾನ ಪ್ರಯುಕ್ತ ರಕ್ತದಾನ ಶಿಬಿರ
ಉಳ್ಳಾಲ: ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಭಾವಹಿಸುತ್ತಾರೆಯೇ ಹೊರತು ಒಂದು ಸಮಾಜದವರು ಮಾತ್ರ ಅಲ್ಲ. ಈ ಹಿನ್ನೆಲೆಯಲ್ಲಿ ಸೌಹಾರ್ದತೆ ಭದ್ರಪಡಿಸಲು ಶಿಬಿರ ಭದ್ರ ಬುನಾದಿ ಹಾಕುತ್ತದೆ ಎಂದು ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ ಕುಮಾರ್ ಆಕೋರಿ ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ( ಸ) ಮಹಾನ್ ಚಾರಿತ್ರ್ಯವಂತ ಪ್ರವಾದಿ (ಸ) ಸಂದೇಶ ಅಭಿಯಾನ ಪ್ರಯುಕ್ತ ಮಂಗಳೂರಿನ ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ವತಿಯಿಂದ ಸೋಮವಾರ ಕಲ್ಲಾಪಿನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಬಿರದಲ್ಲಿ ಪಡೆಯುವ ರಕ್ತ ಲೇಡಿಗೋಷನ್ ಆಸ್ಪತ್ರೆಗೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಎಸ್ಐಒ ದ.ಕ.ಜಿಲ್ಲಾಧ್ಯಕ್ಷ ಮಹಮ್ಮದ್ ಆಸಿಫ್ ಉದ್ಘಾಟಿಸಿ, ಒಂದು ಜೀವ ರಕ್ಷಿಸಿದರೆ ಸಕಲ ಮಾನವರ ಜೀವ ರಕ್ಷಿಸಿದಂತೆ, ನಮ್ಮ ರಕ್ತದಿಂದ ಒಂದು ಜೀವ ಉಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದು ತಿಳಿಸಿದರು.
ಸ್ಪೀಕರ್ ಯುಟಿ ಖಾದರ್ ಶಿಬಿರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಎಸ್ ವೈಎಂ ದ.ಕ.ಜಿಲ್ಲಾಧ್ಯಕ್ಷ ನಿಝಾಮುದ್ದೀನ್ ಉಮರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಖಿಲ್ ಕೆ., ಕರ್ನಾಟಕ ಬ್ಲಡ್ ಹೆಲ್ಪ್ ಲೈನ್ ಅಧ್ಯಕ್ಷ ನಝೀರ್ ಹುಸೈನ್, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಘಟಕದ ಉಪಾಧ್ಯಕ್ಷ ಅಬ್ದುಲ್ ಲತೀಫ್ ಆಲಿಯಾ, ಉಳ್ಳಾಲ ವಲಯ ಅಧ್ಯಕ್ಷ ಅಬ್ದುಲ್ ಕರೀಂ, ಸಮಾಜ ಸೇವಾ ಘಟಕ ಉಳ್ಳಾಲ ವಲಯ ಕಾರ್ಯದರ್ಶಿ ಹಿದಾಯತುಲ್ಲಾ ಮೊದಲಾದವರು ಉಪಸ್ಥಿತರಿದ್ದರು.