ಕಥೋಲಿಕ್ ಶಿಕ್ಷಣ ಮಂಡಳಿ ವತಿಯಿಂದ ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನ ವಿತರಣೆ
ಮಂಗಳೂರು: ಕ್ರೈಸ್ತ ಧರ್ಮಕ್ಷೇತ್ರದ ಕಥೋಲಿಕ್ ಶಿಕ್ಷಣ ಮಂಡಳಿ (ಸಿಬಿಇ)ವತಿಯಿಂದ ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಬಜ್ಜೋಡಿಯ ಶಾಂತಿ ಕಿರಣ್ ಪಾಲನಾ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೆಸ್ಲಿ ಎಫ್. ಶೆಣೈರವರು ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿ ಯಲ್ಲಿ ಪ್ರಥಮ ಪಿಯು ಶಿಕ್ಷಣವನ್ನು ಪಡೆಯುತ್ತಿರುವ ೭೬ ಅರ್ಹ ಕಥೋಲಿಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಚೆಕ್ಗಳನ್ನು ಹಸ್ತಾಂತರಿಸಿದರು.
ಗೌರವ ಅತಿಥಿಯಾಗಿ ಮುಲ್ಕಿಯ ಧರ್ಮಗುರು ಮತ್ತು ಸಿಬಿಇ ಮಾಜಿ ಕಾರ್ಯದರ್ಶಿ ಫಾ. ಆಂಟೋನಿ ಶೇರಾ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಪ್ರಾರಂಭದ ಬಗ್ಗೆ ಮಾಹಿತಿ ನೀಡಿದರು. ಸಿಬಿಇ ಕಾರ್ಯದರ್ಶಿ ವಂ. ಡಾ. ಪ್ರವೀಣ್ ಲಿಯೋ ಲಸ್ರಾದೊ ಮತ್ತು ಸಂತ ಅಲೋಶಿಯಸ್ ಕಾಲೇಜು (ಪರಿಗಣಿತ ವಿಶ್ವವಿದ್ಯಾನಿಲಯ) ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಸಿಬಿಇ ಆಡಳಿತ ಮಂಡಳಿಯ ಸದಸ್ಯರಾದ ಡಾ. ಡೆನಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಡಾ. ಪ್ರವೀಣ್ ಲಿಯೋ ಲಸ್ರಾದೊ ಸ್ವಾಗತಿಸಿದರು, ಡಾ.ಡೆನಿಸ್ ಫೆರ್ನಾಂಡಿಸ್ ವಂದಿಸಿದರು. ಮಂಗಳೂರಿನ ಪಾದುವ ಕಾಲೇಜಿನ ಉಪ ಪ್ರಾಂಶುಪಾಲರಾದ ರೋಶನ್ ಸಂತುಮಾಯರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಂ. ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿವೇತನವು ಕಥೋಲಿಕ್ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಕಥೋಲಿಕ ವಿದ್ಯಾರ್ಥಿ ಬೆಂಬಲ ಕಾರ್ಯಕ್ರಮಕ್ಕಾಗಿ ಅಂದಿನ ಕಾರ್ಯದರ್ಶಿ ವಂ. ಅಂಟೋನಿ ಶೇರಾ ಅವರ ದೂರದೃಷ್ಟಿಯಿಂದ ಆರಂಭಗೊಂಡಿತ್ತು. ವಂ. ಲೆಸ್ಲಿ ಶೆಣೈ 1 ಕೋಟಿ ರೂ. ದೇಣಿಗೆ ನೀಡಿದ್ದು, ಈ ಹಣವನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿ, ಅದರ ಬಡ್ಡಿಯೊಂದಿಗೆ ಮಂಗಳೂರು ಧರ್ಮಪ್ರಾಂತ್ಯದೊಳಗಿನ ಅರ್ಹ ಕಥೋಲಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.