ಮಂಗಳೂರು: ಯುವ ಸಾಹಿತಿ ಫ್ಲಾಯಿಡ್ ಕಿರಣ್ ಮೊರಾಸ್ಗೆ ಪ್ರಶಸ್ತಿ ಪ್ರದಾನ
ಮಂಗಳೂರು: ಯುವ ಸಾಹಿತಿ ಫ್ಲಾಯಿಡ್ ಕಿರಣ್ ಮೊರಾಸ್ (ಕಿರಣ್-ನಿರ್ಖಾಣ್) ಅವರಿಗೆ ಲಿಯೋ ರಾಡ್ರಿಗಸ್ ಕುಟುಂಬ ಪ್ರಾಯೋಜಕತ್ವದ ಕೊಂಕಣಿ ಸಾಹಿತ್ಯಿಕ ಪತ್ರಿಕೆ ಕಿಟ್ಟಲ್.ಕಾಮ್ನ ಪ್ರಶಸ್ತಿಯನ್ನು ಶನಿವಾರ ನಗರದ ಎಂಸಿಸಿ ಬ್ಯಾಂಕ್ನ ಕೇಂದ್ರ ಕಚೇರಿಯ ಆರ್ಎಫ್ಎಕ್ಸ್ ಸಲ್ದಾನಾ ಆಡಿಟೋರಿಯಂನಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನಗೈದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಾಹಿತಿಗಳಿಂದ ಸಮಾಜದ ಬದಲಾವಣೆ ಸಾಧ್ಯ. ಯುವ ಸಾಹಿತಿ ಫ್ಲಾಯಿಡ್ ಕಿರಣ್ ಮೊರಾಸ್ರಿಂದ ಸಮಾಜ ಮತ್ತಷ್ಟು ಸಾಹಿತ್ಯವನ್ನು ನಿರೀಕ್ಷಿಸುತ್ತದೆ ಎಂದರು.
ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ ಸಾಹಿತ್ಯದ ಶಕ್ತಿ ಏನು ಎಂಬುದನ್ನು ಸಾಹಿತ್ಯಾಸಕ್ತರಿಗೆ ಮಾತ್ರ ಗೊತ್ತು. ಸಮಾಜವು ಸಾಹಿತಿಗಳನ್ನು ಕೇವಲವಾಗಿ ಕಾಣುತ್ತದೆ. ಆ ದೃಷ್ಟಿಕೋನವು ಬದಲಾಗಬೇಕು. ಸಾಹಿತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ಅವರ ಸಾಹಿತ್ಯ ಕೃಷಿಗೆ ಹೊಸ ಹುರುಪು ಸಿಗಲಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಫ್ಲಾಯಿಡ್ ಕಿರಣ್ ಮೊರಾಸ್ ಸಾಹಿತ್ಯ ಕ್ಷೇತ್ರದ ತನ್ನ ಅನುಭವನ್ನು ಬಿಚ್ಚಿಟ್ಟರು. ತೀರ್ಪುಗಾರರ ತಂಡದ ಮುಖ್ಯಸ್ಥ ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು. ಪತ್ರಿಕೆಯ ಸಂಪಾದಕ ಎಚ್.ಎಂ. ಪೆರ್ನಾಲ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕವಿ ವಿಲ್ಸನ್ ಕಟೀಲ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ವಿಲ್ಸನ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.