ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಡಿಆರ್ ರಾಜು ಮನವಿ
ಕಾರ್ಕಳ : ಅ. 21ರಂದು ನಡೆಯಲಿರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನೂ ಒಬ್ಬ ಆಕಾಂಕ್ಷಿಯಾಗಿದ್ದೆ. ಪಕ್ಷ ವರಿಷ್ಠರ ಸೂಚನೆಯಂತೆ ಅರ್ಜಿಯನ್ನೂ ಸಲ್ಲಿಸಿದ್ದೆ. ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಸ್ಥಳೀಯ ನಾಯಕರೊಂದಿಗೆ ಹಾಗೂ ವಿವಿಧ ಸ್ಥಳೀಯ ಸಂಸ್ಥೆ, ಸದಸ್ಯರನ್ನು ಭೇಟಿಯಾಗಿ ಚರ್ಚಿ ಸಿದ್ದೆ. ಈ ಸಂದರ್ಭ ನನಗೆ ಬಹಳಷ್ಟು ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿ, ಸ್ಪೂರ್ತಿ ನೀಡಿದ್ದರು.
ಆದರೆ ಹೈಕಮಾಂಡ್ ನಿರ್ಣಯ ಅಂತಿಮವಾಗಿದ್ದು ಪಕ್ಷಕ್ಕೆ ಅದರದ್ದೇ ಆದ ನೀತಿ ಮತ್ತು ನಿಯಮಾವಳಿ ಪ್ರಕಾರ ಈ ಬಾರಿ ನನಗೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ತಿಳಿಸಿದರು.
ನನಗೆ ಅವಕಾಶ ಸಿಗಲಿಲ್ಲ ಎಂದು ರಾಜಕೀಯ ಹಿತೈಷಿಗಳು ನಿರಾಶರಾಗಬಾರದು. ಕಾಂಗ್ರೆಸ್ ಮೈದುಂಬಿ ಹರಿಯುವ ಗಂಗಾನದಿ ಇದ್ದಂತೆ. ಜನ ಸೇವೆಯ ಗುರಿಹೊಂದಿದವನಿಗೆ ಇಲ್ಲಿ ಅವಕಾಶಗಳು ಬೇಕಾದಷ್ಟಿವೆ. ಈ ನಿಟ್ಟಿನಲ್ಲಿ ನನ್ನೊಂದಿಗೆ ದುಡಿದ, ಸಹಕರಿಸಿದ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹುರಿದುಂಬಿಸಿದ, ನನ್ನೆಲ್ಲ ಅಭಿಮಾನಿ ಬಂಧುಮಿತ್ರರಿಗೆ ಹೃದಯಂತರಾಳದ ಧನ್ಯವಾದ ಎಂದರು.
ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸಹಕಾರಿ ಧುರೀಣ, ಜಿಲ್ಲಾ ಮಾಜಿ ಅಧ್ಯಕ್ಷ, ಪಂಚಾಯತ್ ರಾಜ್ ವ್ಯವಸ್ಥೆಯ ಒಳಹೊರಗನ್ನು ಅರಿತ ಅನುಭವಿ ರಾಜಕಾರಿಣಿ, ರಾಜು ಪೂಜಾರಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸ್ಥಳೀಯ ಸಂಸ್ಥೆಗಳ ಸದಸ್ಯ ಮಿತ್ರರು, ಮತದಾರರು ಅವರನ್ನು ಬಹುಮತದಿಂದ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬ ಬೇಕೆಂದು ಅವರು ಕರೆ ನೀಡಿದರು.