ಕೇರಳದ ಓಣಂ ಮಾದರಿಯಲ್ಲಿ ಕರ್ನಾಟದಲ್ಲೂ ನಾಡಹಬ್ಬಕ್ಕೆ ವಿಶೇಷ ಪಡಿತರ ಸಾಮಗ್ರಿ ನೀಡಲು ಮನವಿ
ಮಂಗಳೂರು: ಕೇರಳ ನಾಡಹಬ್ಬವಾದ ಓಣಂ ಹಬ್ಬಕ್ಕೆ 18ಕ್ಕೂ ಮಿಕ್ಕಿ ಆಹಾರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಕರ್ನಾಟಕ ರಾಜ್ಯದ ನಾಡಹಬ್ಬವಾದ ದಸರಾ ಹಬ್ಬಕ್ಕೆ ಕಡಿಮೆ ಪಕ್ಷ 15 ಬಗೆಯ ಆಹಾರ ಸಾಮಗ್ರಿಗಳನ್ನು ಪಡಿತರ ಚೀಟಿ ಮೂಲಕ ಕೊಡುಗೆಯಾಗಿ ವಿತರಿಸುವಂತೆ ಕೋರಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಅಧ್ಯಕ್ಷ ಸಿ. ಅಬ್ದುಲ್ ರಹಮಾನ್ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯ ಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದೆ.
ಇದೇ ಸಂದರ್ಭ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಕಳಚುವಿಕೆ, ವಿಳಾಸ ಬದಲಾವಣೆಗಳಿಗೆ ದೀರ್ಘ ಸಮಯಾ ವಕಾಶವನ್ನು ನೀಡುವಂತೆಯೂ, ಅರ್ಜಿದಾರರಿಗೆ ಶೀಘ್ರ ಪಡಿತರ ಚೀಟಿ ಒದಗಿಸುವಂತೆಯೂ, ಹೊಸ ಅರ್ಜಿದಾರರಿಗೆ ಅವಕಾಶ ಕಲ್ಪಿಸುವಂತೆಯೂ, ಎಪಿಎಲ್ ಚೀಟಿ ಹೊಂದಿದವರಿಗೆ ನಿಯಮಿತ ದರದಲ್ಲಿ ಅಕ್ಕಿ ನೀಡುವಂತೆಯೂ, ವಾರ್ಷಿಕ ಆದಾಯ ರೂ. 2 ಲಕ್ಷ ರೂಪಾಯಿ ಆದಾಯ ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಗೆ ಸೇರ್ಪಡಿಸುವಂತೆಯೂ, ಗೃಹಲಕ್ಷ್ಮೀ ಭಾಗ್ಯದ 2,000 ರೂಪಾಯಿ ಶೀಘ್ರವೇ ಬ್ಯಾಂಕಿಗೆ ಜಮೆ ಮಾಡುವಂತೆಯೂ ಒತ್ತಾಯಿಸಿದೆ.
ದ.ಕ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ನಿಯೋಗದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಅಧ್ಯಕ್ಷ ಸಿ. ಅಬ್ದುಲ್ ರಹಮಾನ್, ನೇತೃತ್ವದಲ್ಲಿ ಮುಸ್ಲಿಂಲೀಗ್ ಪದಾಧಿಕಾರಿಗಳಾದ ಹಾಜಿ ಕೆ.ಸಿ. ಅಬ್ದುಲ್ ಖಾದರ್ ಕಾವೂರು, ಹಾಜಿ ಬಿ.ಎ. ಮೊಹಮ್ಮದ್, ಹಾಜಿ ಅಬ್ದುಲ್ ರಹಮಾನ್ ಕಂದಕ್, ಬಶೀರ್ ಉಳ್ಳಾಲ್, ಮೊಹಮ್ಮದ್ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.