ಮಂಗಳೂರು: ಫೇಸ್ಬುಕ್ ಖಾತೆಯ ಸಂದೇಶ ನಂಬಿ ಹಣ ಕಳಕೊಂಡ ಮಹಿಳೆ
ಪ್ರಕರಣ ದಾಖಲು

ಮಂಗಳೂರು: ಫೇಸ್ಬುಕ್ ಖಾತೆಯೊಂದರಿಂದ ಬಂದ ಸಂದೇಶವನ್ನು ನಂಬಿ ಮಹಿಳೆಯೊಬ್ಬರು 7.10 ಲಕ್ಷ ರೂ.ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ. ತುಷಾರ್ ಪಾಟೀಲ್ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಹಾಯ್ ಎನ್ನುವ ಮೆಸೇಜ್ ತನಗೆ ಬಂದಿದೆ. ಅಲ್ಲದೆ ತಾನು ಯು ಹೆಲ್ತ್ ಮಿಯಾಮಿ ಫ್ಲೋರಿಡಾದಲ್ಲಿ ನ್ಯೂರೋರಜಿಸ್ಟ್ ಆಗಿದ್ದು, ಮದುವೆ ಅಗಿ ವಿಚ್ಛೇದನವಾಗಿದೆ. ಒಂದು ಮಗು ಕೂಡ ಇದೆ ಎಂದು ಹೇಳಿದ್ದಾನೆ. ಬಳಿಕ ತನ್ನ ವಾಟ್ಸ್ಆ್ಯಪ್ ಸಂಖ್ಯೆ ಪಡೆದು ಅದಕ್ಕೆ ಮೆಸೇಜ್ ಮಾಡಿ, ನಿಮ್ಮ ಸ್ನೇಹಕ್ಕಾಗಿ ಗಿಫ್ಟ್ ಆಗಿ ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್ಟಾಪ್, ಐಫೋನ್, 90 ಸಾವಿರ ಯುಎಸ್ ಡಾಲರ್ ಹಾಗೂ ಬಂಗಾರ ಕಳುಹಿಸಿಕೊಡುತ್ತೇನೆ. ವಿಮಾನ ನಿಲ್ದಾಣದಿಂದ ಕರೆ ಬರಲಿದೆ ಎಂದು ತಿಳಿಸಿದ್ದಾನೆ.
ಮರುದಿನ ತನಗೆ ಬಂದ ಫೋನ್ ಕರೆಯಲ್ಲಿ ಡಾ. ತುಷಾರ್ ಪಾಟೀಲ್ರಿಂದ ಗಿಫ್ಟ್ ಬಂದಿದೆ. ಸೆಕ್ಯೂರಿಟಿ ಡಿಪಾಸಿಟ್ ಹಾಗೂ ಲಾಂಡರಿಂಗ್ ಕ್ಲಿಯರೆನ್ಸ್ಗಾಗಿ ಹಣ ಕಳುಹಿಸುವಂತೆ ತಿಳಿಸಿದ್ದಾನೆ. ಅದನ್ನು ನಂಬಿದ ತಾನು ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಬಳಿಕ ಗಿಫ್ಟ್ ನೀಡದೆ ವಂಚನೆ ಮಾಡಿರುವುದಾಗಿ ಮಹಿಳೆ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.