ಮೂಡುಬಿದಿರೆ| ಅಕ್ರಮ ದನ ಸಾಗಾಟ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ
ತಲೆ ಮರೆಸಿಕೊಂಡಿರುವ ಐವರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ

ಬಂಧಿತ ಆರೋಪಿಗಳು
ಮೂಡುಬಿದಿರೆ: ಅಕ್ರಮ ದನ ಸಾಗಾಟದ ಆರೋಪದಲ್ಲಿ ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ್ದ ಪ್ರಕರಣದ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಕಡಂದಲೆಯ ಸುಧೀರ್ ಶೆಟ್ಟಿ ಹಾಗೂ ಸುರತ್ಕಲ್ ನ ಧನರಾಜ್ ಬಂಧಿತ ಆರೋಪಿಗಳಾಗಿದ್ದು, ತಲೆ ಮರೆಸಿಕೊಂಡಿರುವ ಐವರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೂಡುಬಿದಿರೆ ಬಿರಾವಿನ ಕೂಸಪ್ಪ ಪೂಜಾರಿ ಅವರು ಬಜಗೋಳಿಯ ತನ್ನ ಪರಿಚಯದ ಮನೆಯಿಂದ ಹಸುವನ್ನು ಕೃತಕ ಗರ್ಭಧಾರಣೆಗಾಗಿ ಸಂಗಬೆಟ್ಟು ನಿವಾಸಿ ಅಬ್ದುಲ್ ರಹ್ಮಾನ್ ಅವರ ವಾಹನದಲ್ಲಿ ಮೂಡುಬಿದಿರೆಯತ್ತ ತರುತ್ತಿದ್ದರು.
ಈ ವೇಳೆ ಬೆಳುವಾಯಿ ಬಳಿ ವಾಹನವನ್ನು ತಡೆದ ಬಜರಂಗದಳದ 7 ಮಂದಿ ಕಾರ್ಯಕರ್ತರು ವಾಹನ ವನ್ನು ಜಖಂಗೊಳಿಸಿ ಇಬ್ಬರಿಗೂ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಾನುವಾರು ಸಾಗಾಟಕ್ಕಾಗಿ ಪಡೆದು ಕೊಂಡಿದ್ದ ಕಾನೂನು ರೀತಿಯ ದಾಖಲೆ ಪತ್ರಗಳನ್ನು ಹಾಗೂ ಮೊಬೈಲ್ ಫೋನ್ ಗಳನ್ನು ದರೋಡೆಗೈದು ಪರಾರಿಯಾಗಿದ್ದರು ಎಂದು ದೂರಲಾಗಿತ್ತು.
ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ದ್ದರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೂಸಪ್ಪ ಅವರನ್ನು ಖಾಸಗಿ ಆಸ್ಪತ್ರಗೆ ಹಾಗೂ ಅಬ್ದುಲ್ ರಹ್ಮಾನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂಬಂಧ ಕೂಸಪ್ಪ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಕಾರ್ಯಾಚರಣೆ ಕೈಗೊಂಡ ಮೂಡುಬಿದಿರೆ ಪೊಲೀಸ್ ಇನ್ ಸ್ಪೆಕ್ಟರ್ ಸಂದೇಶ್ ನೇತೃತ್ವದ ಪೊಲೀಸ್ ತಂಡ ಇಬ್ಬರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಐವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.