ಮಂಗಳೂರು: ಡಿಸಿ ಮನ್ನಾ ಜಮೀನು ಶೀಘ್ರ ಮಂಜೂರಾತಿಗೆ ಒತ್ತಾಯ

ಮಂಗಳೂರು: ದ.ಕ. ಜಿಲ್ಲೆಯ ಡಿಸಿ ಮನ್ನಾ ಭೂಮಿಯಲ್ಲಿ ಉಳಿಕೆಯಾಗಿರುವ ಸುಮಾರು 190.36 ಎಕರೆ ಭೂಮಿಯನ್ನು ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ ಅರ್ಜಿದಾರರಿಗೆ ಮಂಜೂರು ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಬುಧವಾರ ಈ ಬಗ್ಗೆ ಆಗ್ರಹಿಸಿದ ಪ್ರಮುಖರಾದ ಎಂ. ದೇವದಾಸ್, ಜಿಲ್ಲೆಯಲ್ಲಿ ಲಭ್ಯವಿ ರುವ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಜಿದಾರ ಅರ್ಹ ಫಲಾನುಭವಿ ಗಳಿಗೆ ಒತ್ತಾಯಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಒಟ್ಟು 8509.728 ಎಕರೆ ಡಿಸಿ ಮನ್ನಾ ಸ್ಥಳವನ್ನು ಮೀಸಲಾಗಿರಿಸಲಾಗಿತ್ತು. ಈ ಪೈಕಿ ವಿವಿಧ ಉದ್ದೇಶಗಳಿಗೆ 7366.175 ಎಕರೆ ಜಮೀನು ವಿಲೇ ಮಾಡಲಾಗಿದೆ. ಉಳಿಕೆಯಾದ 1143.553 ಎಕರೆ ಭೂಮಿಯಲ್ಲಿ 977.195 ಎಕರೆ ಜಮೀನು ಅತಿಕ್ರಮಣವಾಗಿದೆ. ದ.ಕ. ಜಿಲ್ಲೆಯ 8 ತಾಲೂಕುಗಳಲ್ಲಿ 5590 ನಿವೇಶನರಹಿತ ಪರಿಶಿಷ್ಟ ಜಾತಿ ಹಾಗೂ ಪಂಗಡಗಳವರು ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಭೂ ಕಂದಾಯ ನಿಯಮಗಳು 1969ಕ್ಕೆ ತಿದ್ದುಪಡಿ ಮಾಡುವ ಮೂಲಕ ಪ್ರತ್ಯೇಕವಾಗಿ ಸ್ಪೆಷಲ್ ಗ್ರಾಂಟ್ ರೂಲ್ಸ್ 2017ನ್ನು ಜಾರಿಗೊಳಿಸುವ ಬದಲು ಉಪ ವಿಭಾಗಾಧಿಕಾರಿಗಳ ವರದಿಯಂತೆಲಭ್ಯ ಇರುವ ಡಿಸಿ ಮನ್ನಾ ಜಮೀನನ್ನು ಬಡತನ ರೇಖೆಗಿಂತ ಕೆಳಗಿನ ದಲಿತ ಕುಟುಂಬಗಳಿಗೆ ಮಾತ್ರ ವಿಸ್ತೀರ್ಣ ನಿಗದಿ ಪಡಿಸಿ ಮಂಜೂರು ಮಾಡುವಂತೆ ದ.ಕ. ಜಿಲ್ಲಾಧಿಕಾರಿ ಕಳೆದ ಡಿಸೆಂಬರ್ನಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ ತಿಂಗಳು ಮೂರು ಕಳೆದರೂ ಈ ಬಗ್ಗೆ ಕ್ರಮ ವಹಿಸದಿರುವುದು ಖಂಡನೀಯ ಎಂದವರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಸಂಬಂಧಿಸಿ ಸುಮಾರು ಆರು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದೆ. ಆದರೆ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿ ವರ್ಗದಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ವಿನ್ಯಾಸದ ಬಗ್ಗೆ ಇನ್ನೂ ಇತ್ಯರ್ಥವಾಗಿಲ್ಲ ಎನ್ನುತ್ತಾರೆ. ಪ್ರತಿ ಸಭೆಗಳಲ್ಲಿ ದಲಿತ ಸಂಘಟನೆಗಳು ಈ ಬಗ್ಗೆ ಒತ್ತಾಯಿಸುತ್ತಾ ಬರುತ್ತಿದ್ದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಲಾಗಿದೆ. ನಗರದಲ್ಲಿ ರಾತ್ರೋರಾತ್ರಿ ಹಲವು ವೃತ್ತಗಳು ತಲೆ ಎತ್ತಿವೆ. ಆದರೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವೃತ್ತದ ಬಗ್ಗೆ ಮಾತ್ರ ಆಸಕ್ತಿ ಇಲ್ಲದಂತೆ ನಡೆದುಕೊಳ್ಳುವ ಮೂಲಕ ಪಾಲಿಕೆಯು ಅಂಬೇಡ್ಕರ್ರಿಗೆ ಅವಮಾನಿಸಿದೆ ಎಂದು ಸಮಿತಿಯ ಅಶೋಕ್ ಕೊಂಚಾಡಿ ಆರೋಪಿಸಿದರು.
ಈ ಬಗ್ಗೆ ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಿಸಲು ಸಂಬಂಧಪಟ್ಟವರು ಮುಂದಾಗದಿದ್ದರೆ ನಗರ ಪಾಲಿಕೆ ಚಲೋ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಗೋಷ್ಟಿಯಲ್ಲಿ ಪ್ರಮುಖರಾದ ರಮೇಶ್ ಕೋಟ್ಯಾನ್, ಎಸ್.ಪಿ. ಆನಂದ, ಶೇಖರ್ ಚಿಲಿಂಬಿ, ಗಿರೀಶ್ ಉಳ್ಳಾಲ್, ಸುಧಾಕರ್ ಬಿ.ಎಸ್., ಪ್ರೇಮ್ ಬಳ್ಳಾಲ್ಬಾಗ್, ದಿನೇಶ್ ಮೂಳೂರು, ಮಂಜಪ್ಪ ಪುತ್ರನ್,ವಿಶುಕುಮಾರ್, ರೋಹಿತ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.