ಅರವಿಂದ್ ಕೇಜ್ರಿವಾಲ್ ರನ್ನು ಹತ್ಯೆಗೈಯ್ಯಲು ಬಿಜೆಪಿ ಯತ್ನಿಸುತ್ತಿದೆ: ದಿಲ್ಲಿ ಸಿಎಂ ಅತಿಶಿ ಆರೋಪ

ದಿಲ್ಲಿ ಮುಖ್ಯಮಂತ್ರಿ ಅತಿಶಿ (Photo: ANI)
ಹೊಸದಿಲ್ಲಿ: ಬಿಜೆಪಿಯೀಗ ಅರವಿಂದ್ ಕೇಜ್ರಿವಾಲ್ ರನ್ನು ಹತ್ಯೆಗೈಯ್ಯಲು ಯತ್ನಿಸುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅತಿಶಿ ಗಂಭೀರ ಆರೋಪ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎರಡನೆ ವ್ಯಕ್ತಿಯ ಹೆಸರು ರೋಹಿತ್ ತ್ಯಾಗಿ ಎಂದಾಗಿದ್ದು, ಆತ ನಿರಂತರವಾಗಿ ಪರ್ವೇಶ್ ವರ್ಮರೊಂದಿಗಿರುತ್ತಾನೆ ಹಾಗೂ ಪರ್ವೇಶ್ ವರ್ಮರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾನೆ. ಆತ ಕೂಡಾ ಕ್ರಿಮಿನಲ್ ಆಗಿದ್ದಾನೆ” ಎಂದು ಅತಿಶಿ ದೂರಿದ್ದಾರೆ.
ರೋಹಿತ್ ತ್ಯಾಗಿ ವಿರುದ್ಧ 2011ರಲ್ಲಿ ಒಂದು ಒಂದು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಹತ್ಯಾ ಪ್ರಯತ್ನದ ಪ್ರಕರಣವೂ ಇದ್ದು, ಈ ಪ್ರಕರಣಕ್ಕೆ 10 ವರ್ಷಗಳ ಶಿಕ್ಷೆ ಇದೆ. ಮೂರನೆಯ ವ್ಯಕ್ತಿಯನ್ನು ಸುಮಿತ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಕಳ್ಳತನ, ದರೋಡೆ ಹಾಗೂ ಹತ್ಯಾಪ್ರಯತ್ನದ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ” ಎಂದು ಅವರು ಆಪಾದಿಸಿದ್ದಾರೆ.
“ಈ ಎಲ್ಲ ಪ್ರಕರಣಗಳು ನಿನ್ನೆ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಿದವರು ಸಾಮಾನ್ಯ ಬಿಜೆಪಿ ಕಾರ್ಯಕರ್ತರಲ್ಲ, ಬದಲಿಗೆ ತರಬೇತಿ ಪಡೆದ ಗೂಂಡಾಗಳು ಮತ್ತು ಕ್ರಿಮಿನಲ್ ಗಳು ಎಂಬುದನ್ನು ಹೇಳುತ್ತಿವೆ. ಚುನಾವಣೆಯ ಹೆದರಿಕೆಯಿಂದ ಬಿಜೆಪಿಯೀಗ ಅರವಿಂದ್ ಕೇಜ್ರಿವಾಲ್ ರನ್ನು ಹತ್ಯೆಗೈಯ್ಯಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.