ವಕ್ಫ್ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ರಾಹುಲ್ ಗಾಂಧಿ ಮಾತನಾಡದಿರುವುದು ಅಚ್ಚರಿ ತಂದಿದೆ : ಕೇಂದ್ರ ಸಚಿವ ಕಿರಣ್ ರಿಜಿಜು

PC | aninews
ಹೊಸದಿಲ್ಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸದಿರುವ ಬಗ್ಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದು ಕ್ರೈಸ್ತ ಸಮುದಾಯದ ಒತ್ತಡದ ಪರಿಣಾಮವಾಗಿರಬಹುದು ಎಂದು ಅವರು ಹೇಳಿದ್ದಾರೆ.
ANI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕೇಂದ್ರ ಸಚಿವ ರಿಜಿಜು, "ಮತದಾನದ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಇರಲಿಲ್ಲ. ಅವರು ಗೈರಾಗಿದ್ದರು. ರಾಹುಲ್ ಗಾಂಧಿ ಮತಚಲಾಯಿಸಲು ತಡವಾಗಿ ಬಂದರು. ಅವರು ಚರ್ಚೆಯಲ್ಲಿ ಭಾಗವಹಿಸಲಿಲ್ಲ. ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಕ್ರೈಸ್ತ ಸಮುದಾಯದಿಂದ ಇಂಡಿಯಾ ಒಕ್ಕೂಟ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡವಿದ್ದಿರಬಹುದು”, ಎಂದು ಹೇಳಿದ್ದಾರೆ.
ಕೇರಳದ ಕ್ರೆಸ್ತ ಸಮುದಾಯಗಳು ಈಗಾಗಲೇ ಮಸೂದೆಗೆ ಬೆಂಬಲ ವ್ಯಕ್ತಪಡಿಸಿವೆ. ಇದೊಂದು ಪರಿಣಾಮಕಾರಿ ಮಸೂದೆಯಾಗಿರುವುದರಿಂದ ಮಸೂದೆಯ ಚರ್ಚೆಯ ವೇಳೆ ನೀವು ಏನು ಮಾತನಾಡಿದರೂ ಅದು ದಾಖಲೆಯಾಗಿ ಉಳಿಯುತ್ತದೆ. ರಾಹುಲ್ ಗಾಂಧಿ ಅವರು ಈ ಮಸೂದೆಯ ಚರ್ಚೆಯಲ್ಲಿ ಭಾಗವಹಿಸಬೇಕಿತ್ತು ಎಂದು ರಿಜಿಜು ಅಭಿಪ್ರಾಯಪಟ್ಟಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ, ರಿಜಿಜು ಕೇರಳದ ಮುನಂಬಮ್ ನ 600 ಕ್ರಿಶ್ಚಿಯನ್ ಕುಟುಂಬಗಳು ವಕ್ಫ್ ಮಂಡಳಿಯ ಭೂಮಿಯ ಮೇಲಿನ ಹಕ್ಕನ್ನು ಪ್ರಶ್ನಿಸುತ್ತಿರುವ ಪ್ರಕರಣವನ್ನು ಉಲ್ಲೇಖಿಸಿದ್ದರು.