ಎನ್ಇಪಿ 2020ನ್ನು ಸಂಕುಚಿತ ದೃಷ್ಟಿಯಿಂದ ನೋಡದೆ, ಅಳವಡಿಸಿಕೊಳ್ಳಿ: ತಮಿಳುನಾಡಿಗೆ ಧಮೇಂದ್ರ ಪ್ರಧಾನ್ ಆಗ್ರಹ

ಧಮೇಂದ್ರ ಪ್ರಧಾನ್ | PC : PTI
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020)ಯನ್ನು ವಿರೋಧಿಸುತ್ತಿರುವುದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಟೀಕಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಅವರು ಸಂಕುಚಿತ ದೃಷ್ಟಿಯನ್ನು ಹೊಂದಿದ್ದಾರೆ ಮತ್ತು ರಾಜಕೀಯ ಅಜೆಂಡಾಗಳನ್ನು ಉಳಿಸಿಕೊಳ್ಳಲು ಪ್ರಗತಿಪರ ಸುಧಾರಣೆಗಳನ್ನು ಬೆದರಿಕೆಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಯಾವುದೇ ರಾಜ್ಯ ಅಥವಾ ಸಮುದಾಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ’ ಎಂದು ಸ್ಟಾಲಿನ್ ಅವರಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಎನ್ ಇ ಪಿ 2020 ಭಾಷಾ ಸ್ವಾತಂತ್ರ್ಯದ ತತ್ವವನ್ನು ಎತ್ತಿ ಹಿಡಿಯುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯಲ್ಲಿ ಕಲಿಕೆಯನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ. ವಾಸ್ತವದಲ್ಲಿ, ತಮಿಳು ಸೇರಿದಂತೆ ದಶಕಗಳ ಕಾಲ ಔಪಚಾರಿಕ ಶಿಕ್ಷಣದಲ್ಲಿ ಬದಿಗೊತ್ತಲ್ಪಟ್ಟಿರುವ ಭಾರತೀಯ ಭಾಷೆಗಳ ಬೋಧನೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಬಲಗೊಳಿಸುವುದು ನೀತಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಪ್ರಧಾನ್ ಗುರುವಾರ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಎರಡು ಕೇಂದ್ರ ಪ್ರಾಯೋಜಿತ ಉಪಕ್ರಮಗಳಾದ ಸಮಗ್ರ ಶಿಕ್ಷಾ ಅಭಿಯಾನ(ಎಸ್ಎಸ್ಎ) ಮತ್ತು ಪಿಎಂ ಶ್ರೀ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ತಳುಕು ಹಾಕಿದ್ದನ್ನು ತನ್ನ ಪತ್ರದಲ್ಲಿ ಆಕ್ಷೇಪಿಸಿದ್ದ ಸ್ಟಾಲಿನ್,ಇದು ಮೂಲಭೂತವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.
ಪ್ರಧಾನಿಗೆ ಕಳುಹಿಸಲಾಗಿರುವ ಪತ್ರವು ಮೋದಿ ಸರಕಾರವು ಉತ್ತೇಜಿಸುತ್ತಿರುವ ಸಹಕಾರಿ ಒಕ್ಕೂಟವಾದದ ಮನೋಭಾವದ ಸಂಪೂರ್ಣ ನಿರಾಕರಣೆಯಾಗಿದೆ. ಆದ್ದರಿಂದ ರಾಜ್ಯವು ಎನ್ಇಪಿ 2020ನ್ನು ಸಂಕುಚಿತ ದೃಷ್ಟಿಯಿಂದ ನೋಡುವುದು ಮತ್ತು ತನ್ನ ರಾಜಕೀಯ ಅಜೆಂಡಾಗಳನ್ನು ಉಳಿಸಿಕೊಳ್ಳಲು ಪ್ರಗತಿಪರ ಶೈಕ್ಷಣಿಕ ಸುಧಾರಣೆಗಳನ್ನು ಬೆದರಿಕೆಗಳನ್ನಾಗಿ ಪರಿವರ್ತಿಸುವುದು ಸೂಕ್ತವಲ್ಲ ಎಂದು ಪ್ರಧಾನ್ ಹೇಳಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಎನ್ಇಪಿ 2020ನ್ನು ನಿರಂತರವಾಗಿ ವಿರೋಧಿಸುವುದು ತಮಿಳುನಾಡಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಈ ನೀತಿಯು ಒದಗಿಸುವ ಅಪಾರ ಅವಕಾಶಗಳು ಮತ್ತು ಸಂಪನ್ಮೂಲಗಳಿಂದ ವಂಚಿತಗೊಳಿಸುತ್ತದೆ. ನೀತಿಯನ್ನು ಪ್ರತಿಯೊಬ್ಬರಿಗೂ ಸೂಕ್ತವಾಗಿರುವಂತೆ ರೂಪಿಸಲಾಗಿದ್ದು,ರಾಜ್ಯಗಳು ತಮ್ಮ ವಿಶಿಷ್ಟ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಜಾರಿಗೊಳಿಸಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ನೀತಿಯನ್ನು ಸಮರ್ಥಿಸಿಕೊಂಡಿರುವ ಅವರು,ಸಮಗ್ರ ಶಿಕ್ಷಾದಂತಹ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಎನ್ ಇ ಪಿ 2020ರ ಜೊತೆ ಹೊಂದಿಕೆಯಾಗುತ್ತವೆ ಮತ್ತು ಪಿಎಂ ಶ್ರೀ ಶಾಲೆಗಳನ್ನು ಎನ್ಇಪಿ ಮಾದರಿ ಶಾಲೆಗಳನ್ನಾಗಿ ಕಲ್ಪಿಸಲಾಗಿದೆ ಎಂದಿದ್ದಾರೆ.
ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನ ವಿರೋಧ ಕುರಿತಂತೆ ಪ್ರಧಾನ್, ಈ ನೀತಿಯು ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವಾರು ಬಿಜೆಪಿಯೇತರ ರಾಜ್ಯಗಳು ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಎನ್ ಇ ಪಿ ಯ ಪ್ರಗತಿಪರ ನೀತಿಗಳನ್ನು ಜಾರಿಗೊಳಿಸಿವೆ. ಎನ್ಇಪಿಯು ಶಿಕ್ಷಣ ಪರಿಧಿಯನ್ನು ಸಂಕುಚಿತಗೊಳಿಸುವ ಬದಲು ವಿಸ್ತರಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಮ್ಮ ಯುವ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವಂತೆ ಪ್ರಧಾನ್ ಪತ್ರದಲ್ಲಿ ಸ್ಟಾಲಿನ್ರನ್ನು ಆಗ್ರಹಿಸಿದ್ದಾರೆ.
ಭಾಷಾ ಪರಂಪರೆಯ ಮಹತ್ವವನ್ನು ಎತ್ತಿ ತೋರಿಸಿರುವ ಅವರು, ಎನ್ ಇ ಪಿ 2020ರ ಕೇಂದ್ರಸ್ತಂಭವು ಭಾರತದ ಶ್ರೀಮಂತ ಭಾಷಾ ಪರಂಪರೆಗೆ ಅದರ ಆಳವಾದ ಮತ್ತು ಅಚಲವಾದ ಗೌರವವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಖಚಿತಪಡಿಸುತ್ತದೆ ಮತ್ತು ತಮಿಳು ಕೇವಲ ಪ್ರಾದೇಶಿಕ ಗುರುತಲ್ಲ,ಅದು ರಾಷ್ಟ್ರೀಯ ಸಂಪತ್ತು ಎಂಬ ಅಂಶವನ್ನು ಬಲಗೊಳಿಸುತ್ತದೆ ಎಂದು ಪ್ರಧಾನ್ ಪತ್ರದಲ್ಲಿ ಹೇಳಿದ್ದಾರೆ.
ಎನ್ ಇ ಪಿ 2020ರ ಅನುಷ್ಠಾನ ಕುರಿತು ಕೇಂದ್ರ ಮತ್ತು ತಮಿಳುನಾಡು ನಡುವೆ ಬಿರುಸಿನ ವಾಗ್ವಾದದ ನಡುವೆಯೇ ಈ ಪತ್ರವು ಬಂದಿದೆ.