Fact-Check | ವಿಮಾನದಲ್ಲಿ ಜಗಳದ ಹಳೆಯ ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ನಿರೂಪಣೆಯೊಂದಿಗೆ ವಿಮಾನದೊಳಗಿನ ಜಗಳದ ಹಳೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ತೀರ್ಪು (ತಪ್ಪು)
ಎಫ್ಐಆರ್ ಪ್ರತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಅಹ್ಮದ್ ಮೊಹಮ್ಮದ್ ಹುಸೇನ್ ಮತ್ತು ಶೇಖ್ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಹೇಳಿಕೆ ಏನು?
ಮೂವರು ವ್ಯಕ್ತಿಗಳು ವಿಮಾನದೊಳಗೆ ಜಗಳವಾಡುತ್ತಿರುವ ವೀಡಿಯೋವನ್ನು ಮುಸ್ಲಿಂ ಪುರುಷರ ಗುಂಪು ಹಿಂದೂ ವ್ಯಕ್ತಿಯೊಬ್ಬನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೀಡಿಯೋದಲ್ಲಿ, ಗಗನಸಖಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಅವರಲ್ಲಿ ಜಗಳ ನಡೆಯುವುದು ಕಾಣುತ್ತದೆ. ಸ್ವಲ್ಪ ಸಮಯದ ನಂತರ, ಇನ್ನೂ ಕೆಲವರು ಸೇರಿಕೊಂಡು ಇನ್ನೊಬ್ಬ ವ್ಯಕ್ತಿಯನ್ನು ಥಳಿಸಲು ಪ್ರಾರಂಭಿಸುತ್ತಾರೆ.
ಎಕ್ಸ್ ಬಳಕೆದಾರರು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ ಮತ್ತು ಅದರ ಶೀರ್ಷಿಕೆ ಹೀಗಿದೆ, "ಓಹ್, ಮೂರ್ಖ ಹಿಂದೂಗಳು, ನೀವು ಯಾವಾಗ ಬದಲಾಗುತ್ತೀರಿ.?" "ಒಂದು ವಿಮಾನದಲ್ಲಿ ಐದು ಮುಸ್ಲಿಮರು ಇದ್ದರು, ಉಳಿದವರು ಹೆಚ್ಚಾಗಿ ಹಿಂದೂಗಳು ಮತ್ತು ಇತರ ಧರ್ಮದ ಜನರು. ಒಬ್ಬ ಮುಸ್ಲಿಮನು ಹಿಂದೂನೊಂದಿಗೆ ಜಗಳವಾಡಲು ಪ್ರಾರಂಭಿಸಿದಾಗ ಮತ್ತು ಅವನನ್ನು ಹೊಡೆಯಲು ಪ್ರಾರಂಭಿಸಿದಾಗ, ಇತರ ಮುಸ್ಲಿಮರು ಸೇರಿಕೊಂಡರು ಮತ್ತು ಹಿಂದೂಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಆದರೆ, ಯಾವುದೇ ಇತರ ಹಿಂದೂಗಳು ಅವರನ್ನು ಬೆಂಬಲಿಸಲು ಮುಂದೆ ಬರಲಿಲ್ಲ (sic)," ಎಂದು ಹೇಳಲಾಗಿದೆ. ಈ ಕಥೆಯನ್ನು ಬರೆಯುವ ಸಮಯದಲ್ಲಿ, ಪೋಷ್ಟ್ ೧೨,೦೦೦ ಲೈಕ್ ಗಳು ಮತ್ತು ೫,೯೦೦ ಮರು ಪೋಷ್ಟ್ ಮಾಡಲಾಗಿದೆ.
ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ಆದರೆ, ಹೇಳಿಕೆ ತಪ್ಪು ಎಂದು ನಾವು ಕಂಡುಕೊಂಡಿದ್ದೇವೆ. ಈ ಘಟನೆಯು ವಾಸ್ತವವಾಗಿ ಡಿಸೆಂಬರ್ ೨೬, ೨೦೨೨ ರಂದು ಥೈಲ್ಯಾಂಡ್ನ ಬ್ಯಾಂಕಾಕ್ನಿಂದ ಪೂರ್ವ ಭಾರತದ ರಾಜ್ಯವಾದ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಹೊರಡುವ ವಿಮಾನದಲ್ಲಿ ಸಂಭವಿಸಿದೆ. ಇಬ್ಬರು ಪ್ರಯಾಣಿಕರನ್ನು ಅಹ್ಮದ್ ಮೊಹಮ್ಮದ್ ಹುಸೇನ್ ಮತ್ತು ಶೇಖ್ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಏನಾಯಿತು?
ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಘಟನೆಯ ಕುರಿತು ನಾವು ಅನೇಕ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಎನ್ಡಿಟಿವಿ ಆಂಗ್ಲ ಭಾಷೆಯ ಸುದ್ದಿ ಚಾನೆಲ್, ಡಿಸೆಂಬರ್ ೨೯, ೨೦೨೨ ರಂದು ತನ್ನ ಯೂಟ್ಯೂಬ್ ಚಾನಲ್ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ವೀಡಿಯೋವನ್ನು ಪೋಷ್ಟ್ ಮಾಡಿದೆ.
ಚಾನೆಲ್ನೊಂದಿಗೆ ಮಾತನಾಡಿದ ಅದೇ ಥಾಯ್ ಸ್ಮೈಲ್ ಫ್ಲೈಟ್ನಲ್ಲಿರುವ ಮತ್ತೊಬ್ಬ ಪ್ರಯಾಣಿಕ ಅಲೋಕ್ ಕುಮಾರ್, ಏರ್ ಹೋಸ್ಟೆಸ್ನಿಂದ ಪದೇ ಪದೇ ವಿನಂತಿಸಿದ ಹೊರತಾಗಿಯೂ ಸುರಕ್ಷತಾ ಪ್ರೋಟೋಕಾಲ್ಗೆ ಅನುಗುಣವಾಗಿ ತಮ್ಮ ಆಸನವನ್ನು ನೇರಗೊಳಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಒಬ್ಬರ ವಿವಾದವಾಗಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿಯಾಗಿ, ವಿಮಾನದೊಳಗಿನ ದಾಳಿಯ ದೃಶ್ಯಾವಳಿಗಳು ವೈರಲ್ ಆದ ನಂತರ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ (ಬಿಸಿಎಎಸ್) ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಹಲ್ಲೆಗೊಳಗಾದ ಪ್ರಯಾಣಿಕನನ್ನು ಅಹ್ಮದ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದ್ದು, ಆತನಿಗೆ ಗುದ್ದುತ್ತಿರುವುದನ್ನು ಕಂಡ ಪ್ರಯಾಣಿಕರನ್ನು ಶೇಖ್ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಸಿಬ್ಬಂದಿಯ ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ಹುಸೇನ್ ನಿರಾಕರಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಏರ್ಲೈನ್ಸ್ ವರದಿ ತಿಳಿಸಿದೆ ಎಂದು ಸುದ್ದಿ ವರದಿ ಸೇರಿಸಲಾಗಿದೆ. ಡಿಸೆಂಬರ್ ೨೯, ೨೦೨೨ ರಂದು, ವಿಮಾನಯಾನ ಸಂಸ್ಥೆಯು ಘಟನೆಯ ಬಗ್ಗೆ ಕ್ಷಮೆಯಾಚಿಸಿದೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ)
ಇದಲ್ಲದೆ, ಡಿಸೆಂಬರ್ ೨೯, ೨೦೨೨ ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎನ್ಎಸ್ ಸಿಬಿಐ) ಪೊಲೀಸ್ ಠಾಣೆಯಲ್ಲಿ ಬಿಸಿಎಎಸ್ ಪ್ರಾದೇಶಿಕ ನಿರ್ದೇಶಕರು ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿತು. ಎಫ್ಐಆರ್ ಒಳಗೊಂಡಿರುವ ಪ್ರಯಾಣಿಕರನ್ನು ಅಹ್ಮದ್ ಮೊಹಮ್ಮದ್ ಹುಸೇನ್ ಮತ್ತು ಶೇಖ್ ಅಜರುದ್ದೀನ್ ಎಂದು ಗುರುತಿಸಲಾಗಿದೆ.
ಎಫ್ಐಆರ್ ಪ್ರತಿಯ ಸ್ಕ್ರೀನ್ಶಾಟ್ ಮತ್ತು ಆರೋಪಿ ಮತ್ತು ಬಲಿಪಶುವಿನ ಹೆಸರನ್ನು ಕೆಂಪು ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ. (ಮೂಲ: ಎನ್ಎಸ್ಸಿಬಿಐ ಏರ್ಪೋರ್ಟ್ ಪೋಲೀಸ್ ಸ್ಟೇಷನ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ತೀರ್ಪು
ಥಾಯ್ ಸ್ಮೈಲ್ ಏರ್ಕ್ರಾಫ್ಟ್ನಿಂದ ವಿಮಾನದೊಳಗಿನ ಜಗಳದ ಮೂರು ವರ್ಷಗಳ ಹಳೆಯ ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.
ಈ ಲೇಖನವನ್ನು ಮೊದಲು'logicallyfacts.com' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.