ಅತಿ ಕಡಿಮೆ ಅವಧಿಯ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್
ತೆಲುಗು ಕವಿಯ ಸಾಲುಗಳನ್ನು ಉಲ್ಲೇಖಿಸಿದ ವಿತ್ತ ಸಚಿವೆ

Photo | PTI
ಹೊಸದಿಲ್ಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದು, 75 ನಿಮಿಷಗಳ ಭಾಷಣದೊಂದಿಗೆ ತಮ್ಮ 8ನೇ ಬಜೆಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.
ಮೀನಿನ ಕಸೂತಿ ಮತ್ತು ಗೋಲ್ಡನ್ ಬಾರ್ಡರ್ ನೊಂದಿಗೆ ಬಿಳಿ ಬಣ್ಣದ ಕೈಮಗ್ಗದ ರೇಷ್ಮೆ ಸೀರೆಯನ್ನು ಧರಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆಗೆ ಗೌರವ ಸಲ್ಲಿಸಿದ್ದಾರೆ. ಸದನವು ಆರಂಭವಾದ ತಕ್ಷಣ ಸ್ಪೀಕರ್ ಓಂ ಬಿರ್ಲಾ ಅವರು ಬಜೆಟ್ ಮಂಡಿಸಲು ಸೀತಾರಾಮನ್ ಅವರಿಗೆ ಆಹ್ವಾನ ನೀಡುತ್ತಿದ್ದಂತೆ ಮಹಾಕುಂಭದಲ್ಲಿ ಕಾಲ್ತುಳಿತದ ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಲೋಕಸಭೆಯಿಂದ ಹೊರನಡೆದಿದ್ದಾರೆ.
ಸೀತಾರಾಮನ್ ಅವರು 2020ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಸುದೀರ್ಘವಾದ ಬಜೆಟ್ ಭಾಷಣವನ್ನು ಮಾಡಿದ್ದರು. 2019ರಲ್ಲಿ ಸೀತಾರಾಮನ್ ಅವರು ಬಜೆಟ್ ಭಾಷಣವು 2 ಗಂಟೆ 17 ನಿಮಿಷಗಳ ಕಾಲ ನಡೆಯಿತು. 2021ರಲ್ಲಿ ಅವರ ಭಾಷಣವು 1 ಗಂಟೆ 50 ನಿಮಿಷಗಳ ಕಾಲ ಮತ್ತು 2022ರಲ್ಲಿ 92 ನಿಮಿಷಗಳು ಮತ್ತು 2023ರಲ್ಲಿ 87 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು.
ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ತೆಲುಗು ಕವಿ ಗುರಜಡ ಅಪ್ಪಾರಾವ್ ಅವರ ʼದೇಶಮಂತೆ ಮತ್ತಿ ಕಾಡೋಯಿ, ದೇಶಮಂತೆ ಮನುಷ್ಯೋಯಿ(Desamante matti kaadoyi, Desamante manushuloyi) (ದೇಶವು ಕೇವಲ ಭೂಮಿ ಅಲ್ಲ, ಅದರ ಜನರು) ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ.