ಭಾರತಕ್ಕೆ ಅಕ್ರಮ ಪ್ರವೇಶ: ಬಾಂಗ್ಲಾದೇಶದ ನಾಲ್ವರು ಪ್ರಜೆಗಳ ಬಂಧನ
Photo/GRPS
ಅಗರ್ತಲಾ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದಕ್ಕಾಗಿ ಅಗರ್ತಲಾ ರೈಲು ನಿಲ್ದಾಣದಿಂದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ಭದ್ರತಾ ಪಡೆ ಬಂಧಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಜೆಗಳ ಭಾರತ ಪ್ರವೇಶವನ್ನು ಸುಗಮಗೊಳಿಸಿದ ತ್ರಿಪುರಾ ಮೂಲದ ಇತರ ಐವರನ್ನು ಕೂಡ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ನಾಲ್ವರು ಬಾಂಗ್ಲಾದೇಶದ ಪ್ರಜೆಗಳು ಕೋಲ್ಕತ್ತಾಕ್ಕೆ ಹೋಗಲು ಶನಿವಾರ ರೈಲು ಹತ್ತುವ ಸಂದರ್ಭ ವಶಕ್ಕೆ ತೆಗೆದುಕೊಳ್ಳಲಾಯಿತು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತಕ್ಕೆ ಆಗಮಿಸಿರುವುದಕ್ಕೆ ಯಾವುದೇ ಸಮರ್ಪಕ ದಾಖಲೆಗಳನ್ನು ಹಾಜರುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಅನಂತರ ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.
‘‘ಅವರನ್ನು ವಿಚಾರಣೆಗೆ ಮೂರು ದಿನಗಳ ಪೊಲೀಸ್ ರಿಮಾಂಡ್ ಗೆ ಕಳುಹಿಸಲಾಗಿದೆ. ಅನಂತರ ಇಲ್ಲಿನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು’’ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಬಿಎಸ್ಎಫ್ ಹಾಗೂ ರೈಲ್ವೆ ಪೊಲೀಸ್ ನ ಜಂಟಿ ತಂಡ ಸೆಪಾಹಿಜಾಲಾ ಜಿಲ್ಲೆಯ ಸೋನಾಮುರಾದ ವಿವಿಧ ಸ್ಥಳಗಳಲ್ಲಿ ಶನಿವಾರ ದಾಳಿ ನಡೆಸಿದೆ ಹಾಗೂ ಒಳನುಸುಳುವಿಕೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಐವರನ್ನು ಬಂಧಿಸಿದೆ.