ಕಾಲ್ತುಳಿತದಲ್ಲಿ ಮೃತಪಟ್ಟವರ ನೈಜ ಸಂಖ್ಯೆಯನ್ನು ಉತ್ತರ ಪ್ರದೇಶ ಸರಕಾರ ಮರೆಮಾಚಿದೆ: ಮಮತಾ ಬ್ಯಾನರ್ಜಿ
Photo : @AITCofficial / X
ಕೋಲ್ಕತಾ: ಉತ್ತರಪ್ರದೇಶದ ಪ್ರಯಾಗರಾಜ್ನ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ನೈಜ ಸಂಖ್ಯೆಯನ್ನು ಉತ್ತರಪ್ರದೇಶ ಸರಕಾರ ಮರೆ ಮಾಚಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕುಂಭಮೇಳದಲ್ಲಿ 30 ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಹಲವಾರು ಮಾಧ್ಯಮಗಳು ನೈಜ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿರಬಹುದು ಎಂದು ಹೇಳಿವೆ.
ಪಶ್ಚಿಮಬಂಗಾಳ ವಿಧಾನ ಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಆರಂಭದಲ್ಲಿ ಉತ್ತರಪ್ರದೇಶ ಸರಕಾರ ದುರಂತದ ವಾಸ್ತವ ಚಿತ್ರಣ ನೀಡುವುದನ್ನು ತಡೆಯಲು ಪ್ರಯತ್ನಿಸಿತು ಎಂದು ಹೇಳಿದ್ದಾರೆ.
ಮಹಾಕುಂಭ ಮೇಳದ ಕಾಲ್ತುಳಿತದ ಘಟನೆಯಲ್ಲಿ ಹಲವು ಜನರು ಸಾವನ್ನಪ್ಪಿದ್ದಾರೆ. ಆದರೆ, ನೈಜ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಅವರು ಕುಂಭ ಮೇಳದ ಬಗ್ಗೆ ಉತ್ಪ್ರೇಕ್ಷಿತ ಪ್ರಚಾರ ಮಾಡಿದ್ದಾರೆ. ಆದರೆ, ಅಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.