ದಿಲ್ಲಿ ಅಬಕಾರಿ ನೀತಿ ಪ್ರಕರಣ : ಕೇಜ್ರಿವಾಲ್ ತಪ್ಪಿತಸ್ಥರೆಂದು ಸೂಚಿಸುವ ಸುದ್ದಿ ಚರ್ಚೆಯ ಭಾಗವನ್ನು ಅಳಿಸುವಂತೆ ನ್ಯೂಸ್ 18 ಇಂಡಿಯಾಗೆ NBDSA ಸೂಚನೆ

ಅರವಿಂದ್ ಕೇಜ್ರಿವಾಲ್ (Photo: PTI)
ಹೊಸದಿಲ್ಲಿ : ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ತಪ್ಪಿತಸ್ಥರೆಂದು ಬಿಂಬಿಸುವ ಸುದ್ದಿ ಚರ್ಚೆಯ ಭಾಗವನ್ನು ಅಳಿಸುವಂತೆ NBDSA ನ್ಯೂಸ್ 18 ಇಂಡಿಯಾಕ್ಕೆ ನಿರ್ದೇಶನ ನೀಡಿದೆ.
ನ್ಯೂಸ್ 18 ಇಂಡಿಯಾ ಸುದ್ದಿ ವಾಹಿನಿ 2024ರ ಮಾರ್ಚ್ 28ರಂದು 'ಗೂಂಜ್ ವಿತ್ ರುಬಿಕಾ ಲಿಯಾಕತ್' (Goonj with Rubika Liyaquat) ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಸುದ್ದಿ ಚರ್ಚೆಯ ವೇಳೆ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಪ್ಪಿತಸ್ಥರೆಂದು ಆರೋಪಿಸಲಾಗಿದೆ. ನ್ಯೂಸ್ 18 ಇಂಡಿಯಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಸುದ್ದಿ ಪ್ರಸಾರ ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(News Broadcasting Digital Standards Authority (NBDSA) ನ್ಯೂಸ್ 18 ಇಂಡಿಯಾ ಸುದ್ದಿವಾಹಿನಿಗೆ ತನ್ನ ಪ್ರಸಾರ ಮಾಡಿದ ಸುದ್ದಿ ಚರ್ಚೆಯ ಒಂದು ಭಾಗವನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ.
ಈ ಕುರಿತು ಇಂದ್ರಜೀತ್ ಘೋರ್ಪಡೆ ಕಾರ್ಯಕ್ರಮದ ನಿರೂಪಕಿ ರುಬಿಕಾ ಲಿಯಾಕತ್ ಮತ್ತು ಕಾರ್ಯಕ್ರಮದ ವಿರುದ್ಧ ದೂರು ನೀಡಿದ್ದರು. ರುಬಿಕಾ ಲಿಯಾಕತ್ ಸುದ್ದಿ ಚರ್ಚೆಯಲ್ಲಿ "ಅಗರ್ ಆಪ್ ನೆ ಭ್ರಷ್ಟಾಚಾರ್ ನಹಿ ಕರಾ ಹೋತಾ ತೋ ಆಪ್ಕೆ ಅಗೇನ್ಸ್ಟ್ ಇತ್ನೆ ಬಡೇ ಚಾರ್ಜ್ಸ್ ಫ್ರೇಮ್ ನಹಿ ಹೋತಿ?" ಸೇರಿದಂತೆ ಹಲವು ಹೇಳಿಕೆಗಳನ್ನು ನೀಡುವ ಮೂಲಕ ಕೇಜ್ರಿವಾಲ್ ಅವರು ತಪ್ಪು ಮಾಡಿದ್ದಾರೆ ಎಂದು ತಪ್ಪಾಗಿ ಸೂಚಿಸಿದ್ದಾರೆ. ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿರುವಾಗ ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುವುದನ್ನು ಸೂಚಿಸುತ್ತದೆ. ಇದು ಮಾಧ್ಯಮದ ನಿಷ್ಪಕ್ಷಪಾತ, ನಿಖರತೆ ಮತ್ತು ನ್ಯಾಯಸಮ್ಮತತೆಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.
ಈ ಮಧ್ಯೆ ಪ್ರಸಾರ ಮಾಡಿರುವ ಸುದ್ದಿ ಚರ್ಚೆಯು ಕೇಜ್ರಿವಾಲ್ ತಪ್ಪಿತಸ್ಥರೆಂದು ಸೂಚಿಸುತ್ತದೆ ಎಂಬ ಆರೋಪವನ್ನು ನ್ಯೂಸ್ 18 ಇಂಡಿಯಾ ನಿರಾಕರಿಸಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅಧ್ಯಕ್ಷತೆಯ ಎನ್ ಬಿಡಿಎಸ್ ಎ ನ್ಯೂಸ್ 18 ಇಂಡಿಯಾ ಪ್ರಸಾರ ಮಾಡಿರುವ ಸುದ್ದಿಯ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಪ್ರಧಾನ ಮಂತ್ರಿಯನ್ನು ಸಮರ್ಥಿಸುವ ಹಕ್ಕು ನಿರೂಪಕರಿಗೆ ಇದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ತಪ್ಪಿತಸ್ಥರೆಂದು ಹೇಳುವುದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ವರದಿಯನ್ನು ಮಾಡುವಾಗ ಪಾಲಿಸಬೇಕಾದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಆದೇಶ ಹೊರಡಿಸಿದ 7 ದಿನಗಳಲ್ಲಿ ವಿವಾದಾತ್ಮಕ ಭಾಗವನ್ನು ತೆಗೆದುಹಾಕುವ ಮೂಲಕ ಪ್ರಸಾರ ಮಾಡಿದ ವೀಡಿಯೊವನ್ನು ಪುನಃ ಸಂಪಾದಿಸುವಂತೆ NBDSA ನ್ಯೂಸ್ 18 ಇಂಡಿಯಾಗೆ ಸೂಚಿಸಿದೆ. ಇದಲ್ಲದೆ ಭವಿಷ್ಯದಲ್ಲಿ ಸುದ್ದಿ ಪ್ರಸಾರದ ವೇಳೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ನ್ಯೂಸ್ 18ಗೆ ಸೂಚಿಸುವುದರೊಂದಿಗೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ.