ಜಮ್ಮು ಮತ್ತು ಕಾಶ್ಮೀರ | ದಶಕಗಳಿಂದ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ರಕ್ಷಣೆ ನೀಡುವ ಗುರಿ: ಬುಲ್ಡೋಝರ್ ಪ್ರತಿಬಂಧಕ ಮಸೂದೆ ಮಂಡಿಸಲು ಪಿಡಿಪಿ ಸಜ್ಜು

ಶ್ರೀನಗರ: ಮಾರ್ಚ್ 3ರಿಂದ ಪ್ರಾರಂಭಗೊಳ್ಳಲಿರುವ ಜಮ್ಮು ಮತ್ತು ಕಾಶ್ಮೀ್ರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಸರಕಾರಿ ಭೂಮಿಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ನಾಗರಿಕರ ಆಸ್ತಿ ಹಕ್ಕನ್ನು ರಕ್ಷಿಸಲು ಪಿಡಿಪಿಯ ಶಾಸಕಿ ವಹೀದ್ ಪರ್ರಾ ಬುಲ್ಡೋಝರ್ ಪ್ರತಿಬಂಧಕ ಮಸೂದೆಯನ್ನು ಮಂಡಿಸಲು ಸಜ್ಜಾಗಿದ್ದಾರೆ.
ಸರಕಾರಿ ಭೂಮಿಗಳಲ್ಲಿ ವಾಸಿಸುತ್ತಿರುವ ನಾಗರಿಕರನ್ನು ತೆರವುಗೊಳಿಸುವ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂತಹ ನಿವಾಸಿಗಳ ಭೂ ಮಾಲಕತ್ವವನ್ನು ರಕ್ಷಿಸುವ ಉದ್ದೇಶ ಹೊಂದಿರುವ ಜಮ್ಮು ಮತ್ತು ಕಾಶ್ಮೀರ (ಸಾರ್ವಜನಿಕ ಭೂಮಿಗಳ ನಿವಾಸಿಗಳ ಆಸ್ತಿ ಹಕ್ಕು ಸಕ್ರಮ ಮತ್ತು ಮಾನ್ಯತೆ) ಮಸೂದೆ, 2025 ಎಂಬ ಹೆಸರಿನ ಮಸೂದೆ ಸೋಮವಾರ ಮಂಡನೆಯಾಗುವ ಸಾಧ್ಯತೆ ಇದೆ.
ಸರಕಾರಿ ನೇತೃತ್ವದ ಆಸ್ತಿ ನೆಲಸಮ ಕಾರ್ಯಾಚರಣೆಯನ್ನು ತಡೆಗಟ್ಟುವ ಹಾಗೂ ಸರಕಾರಿ ಭೂಮಿಗಳಲ್ಲಿನ ಅನಧಿಕೃತ ನಿರ್ಮಾಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿಯನ್ನು ಈ ಪ್ರಸ್ತಾವಿತ ಮಸೂದೆ ಹೊಂದಿದೆ. ಜಮ್ಮು ಮತ್ತು ಕಾಶ್ಮೀರ ಕೃಷಿ ಸುಧಾರಣೆಗಳ ಕಾಯ್ದೆ, 1976ರ ಸೆಕ್ಷನ್ 4ರ ಅಡಿ ಸರಕಾರಿ ಭೂಮಿ, ಕಚಾರಿಯ ಭೂಮಿ, ಸಾಮಾನ್ಯ ಭೂಮಿ ಹಾಗೂ ಶಮಿಲಾತ್ ಭೂಮಿಗಳಲ್ಲಿ ಅಕ್ರಮ ಹಾಗೂ ಅನಧಿಕೃತ ವಸತಿ ನಿರ್ಮಾಣಗಳನ್ನು ತಡೆಯುವಲ್ಲಿ ಈ ಹಿಂದಿನ ಸರಕಾರಗಳು ಹಾಗೂ ಸಾರ್ವಜನಿಕ ಕಚೇರಿಗಳ ವೈಫಲ್ಯದ ಕುರಿತು ಈ ಮಸೂದೆ ಬೆಳಕು ಚೆಲ್ಲಿದೆ.
“ಸಾರ್ವಜನಿಕ ಕಲ್ಯಾಣದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀಿರದಾದ್ಯಂತ ನಿರ್ಮಿಸಲಾಗಿರುವ ಅಕ್ರಮ ವಸತಿ ನಿವಾಸಗಳನ್ನು ಸಕ್ರಮಗೊಳಿಸಲು ಅನುಕಂಪದ ನಿರ್ಧಾರ ಕೈಗೊಳ್ಳಬೇಕಿರುವುದು ಈ ಹೊತ್ತಿನ ಅಗತ್ಯವಾಗಿದೆ” ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸುವಂತೆ ಆಡಳಿತಾರೂಢ ನ್ಯಾಶನಲ್ ಕಾನ್ಫರೆನ್ಸ್, ಬಿಜೆಪಿ ಹಾಗೂ ಇನ್ನಿತರ ರಾಜಕೀಯ ಪಕ್ಷಗಳಿಗೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮನವಿ ಮಾಡಿದ್ದಾರೆ.
ಸೌಜನ್ಯ: deccanherald.com