PMJAY ಯೋಜನೆಯಡಿ ‘ಮೃತ’ ರೋಗಿಗಳ ಚಿಕಿತ್ಸೆಗೆ 7 ಕೋಟಿ ಪಾವತಿ: ಸಿಎಜಿ ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಈ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ 3,446 ರೋಗಿಗಳ ಚಿಕಿತ್ಸೆಗೆ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ (PMJAY) ಒಟ್ಟು 6.97 ಕೋಟಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಎತ್ತಿ ತೋರಿಸಲಾಗಿದೆ ಎಂದು ಬುಧವಾರ The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
2018ರಲ್ಲಿ ಜಾರಿಗೊಂಡ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಪಿಎಂಜೆಎವೈ ಯೋಜನೆಯು ಬಡಜನರಿಗೆ ಆರೋಗ್ಯ ವಿಮೆ ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈ ಯೋಜನೆಯು ಬಡ ಕುಟುಂಬಗಳಿಗೆ ರೂ. 5 ಲಕ್ಷ ಆರೋಗ್ಯ ವಿಮೆಯ ಕೊಡುಗೆಯನ್ನು ನೀಡುತ್ತದೆ.
ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿರುವ ರೋಗಿಗಳಿಗೆ ಈ ಯೋಜನೆಯಡಿ ಚಿಕಿತ್ಸೆ ಮುಂದುವರಿಸಿರುವುದನ್ನು ತಮ್ಮ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯಲ್ಲಿ ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಗುರುತಿಸಿದ್ದಾರೆ.
3,446 ರೋಗಿಗಳ ಪೈಕಿ 3,903 ರೋಗಿಗಳು ಇಂತಹ ಲಾಭ ಪಡೆದಿರುವುದನ್ನು ಗುರುತಿಸಲಾಗಿದೆ ಎಂದೂ ಮಹಾ ಲೆಕ್ಕಪರಿಶೋಧಕರು ಹೇಳಿದ್ದಾರೆ.
ಕೇರಳದಲ್ಲಿ ಅತಿ ಹೆಚ್ಚು (966) ಮೃತ ರೋಗಿಗಳು ಪತ್ತೆಯಾಗಿದ್ದು, ಅವರ ಚಿಕಿತ್ಸೆಗಾಗಿ ರೂ. 2.60 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು, ಇಲ್ಲಿ ಇಂತಹ 403 ರೋಗಿಗಳಿಗೆ ರೂ. 1.12 ಕೋಟಿ ಮೊತ್ತವನ್ನು ಪಾವತಿಸಲಾಗಿದ್ದರೆ, ಛತ್ತೀಸ್ ಗಢದಲ್ಲಿ 365 ರೋಗಿಗಳಿಗೆ ರೂ. 33.70 ಲಕ್ಷ ಮೊತ್ತವನ್ನು ಪಾವತಿಸಲಾಗಿದೆ.
ನಿಯಮಾವಳಿಗಳ ಪ್ರಕಾರ, ಒಂದು ವೇಳೆ ರೋಗಿಯು ಆಸ್ಪತ್ರೆಗೆ ದಾಖಲಾದ ನಂತರ ಅಥವಾ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದಕ್ಕೂ ಮುನ್ನ ಮೃತಪಟ್ಟರೆ, ಈ ಕುರಿತು ಲೆಕ್ಕ ಪರಿಶೋಧನೆ ನಡೆಸಿದ ನಂತರ ಆಸ್ಪತ್ರೆಗೆ ಹಣ ಪಾವತಿ ಮಾಡಬೇಕು ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
2020ರ ಆರಂಭದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಮೃತ ರೋಗಿಗಳನ್ನು ನೋಂದಾಯಿಸುವುದರಲ್ಲೂ ನ್ಯೂನತೆ ಹೊಂದಿದ್ದರತ್ತ ಭಾರತೀಯ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯು ಬೊಟ್ಟು ಮಾಡಿದೆ.
“ಲೆಕ್ಕ ಪರಿಶೋಧನೆಯ ಉಲ್ಲೇಖವನ್ನು ಅನುಮೋದಿಸಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು, ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ ಯಾವುದೇ ರೋಗಿ ಮೃತಪಟ್ಟಿದ್ದಾನೆ ಎಂದು ತೋರಿಸುತ್ತಿದ್ದರೆ, ಅಂತಹ ರೋಗಿಯು ಪಿಎಂಜೆಎವೈ ಯೋಜನೆಯಡಿ ಮತ್ತಷ್ಟು ಲಾಭ ಪಡೆಯುವುದನ್ನು ತಪ್ಪಿಸಲು ಆ ರೋಗಿಯ ಪಿಎಂಜೆಎವೈ ಗುರುತನ್ನು ನಿಷ್ಕ್ರಿಯಗೊಳಿಸುವುದನ್ನು ಖಾತ್ರಿಗೊಳಿಸಲು ಎಪ್ರಿಲ್ 22, 2020ರಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜುಲೈ, 2020ರಲ್ಲಿ ತಿಳಿಸಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
ಸಿಎನ್ಬಿಸಿ ಟಿವಿ18 ಸುದ್ದಿ ಸಂಸ್ಥೆಯ ಪ್ರಕಾರ, ಸರಿಪಡಿಸುವ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಹೊರತಾಗಿಯೂ, ಈ ಹಿಂದೆ ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿರುವ ರೋಗಿಗಳು ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ವಹಿವಾಟು ನಿರ್ವಹಣಾ ವ್ಯವಸ್ಥೆ ಅವಕಾಶ ಒದಗಿಸಿದೆ ಎಂದು ನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರೂ ಕೂಡಾ ಹೇಳಿದ್ದಾರೆ.
ವಿವಿಧ ಕಾರ್ಯನಿರ್ವಹಣೆಯ ಕಾರಣಗಳಿಗಾಗಿ ವಹಿವಾಟು ನಿರ್ವಹಣಾ ವ್ಯವಸ್ಥೆಯಲ್ಲಿ ಹಿಂದಿನ ದಿನಾಂಕಗಳ ದಾಖಲಾತಿಗಳನ್ನು ನಮೂದಿಸಲು ಅವಕಾಶ ಒದಗಿಸಲಾಗಿದೆ ಎಂದು ಆಗಸ್ಟ್ 2022ರಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಹೇಳಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಿಎಂಜೆಎವೈ ಯೋಜನೆಯಡಿ 7.5 ಲಕ್ಷ ಫಲಾನುಭವಿಗಳು ಕೇವಲ ಒಂದೇ ಮೊಬೈಲ್ ಫೋನ್ ನಂಬರ್ (9999999999) ಮೂಲಕ ನೋಂದಾಯಿಸಿಕೊಂಡಿದ್ದಾರೆ ಎಂದೂ ಕಳೆದ ವಾರ ವರದಿಯಾಗಿತ್ತು.