ಅಮಿತ್ ಶಾರನ್ನು ಸ್ವಾಗತಿಸಲು ಹಾಕಿದ ಪೋಸ್ಟರ್ ನಲ್ಲಿ ತಮಿಳು ನಟನ ಚಿತ್ರ!
ಕಿಡಿಗೇಡಿಗಳ ಕೈವಾಡದ ಶಂಕೆ ವ್ಯಕ್ತಪಡಿಸಿದ ಅಣ್ಣಾಮಲೈ

Photo credit: hindutamil.in
ಚೆನ್ನೈ: ತಮಿಳುನಾಡಿನ ಥಕ್ಕೋಲಂನಲ್ಲಿರುವ ನೂತನ ರಾಜಾದಿತ್ಯ ಚೋಳ ನೇಮಕಾತಿ ತರಬೇತಿ ಕೇಂದ್ರದಲ್ಲಿ ನಡೆದ ಸಿಐಎಸ್ಎಫ್ ದಿನದಂದು ಭಾಗವಹಿಸಿದ್ದ ಅಮಿತ್ ಶಾ ಅವರನ್ನು ಸ್ವಾಗತಿಸಲು, ಅಮಿತ್ ಶಾ ಅವರನ್ನು ಹೋಲುವ ತಮಿಳು ನಟ-ನಿರ್ದೇಶಕ ಸಂಥಾನ ಭಾರತಿ ಅವರ ಚಿತ್ರವನ್ನೊಳಗೊಂಡ ಪೋಸ್ಟರ್ ಕಾಣಿಸಿಕೊಂಡಿದೆ.
ಅಮಿತ್ ಶಾ ಅವರು ಆಗಮಿಸಲಿರುವ ಕಾರ್ಯಕ್ರಮಕ್ಕೆ ಹಾಕಿರುವ ಪೋಸ್ಟರ್ಗಳಲ್ಲಿ ಸಂಥಾನ ಭಾರತಿಯವರ ಚಿತ್ರಗಳಿದ್ದು, "ಭಾರತದ ಉಕ್ಕಿನ ಮನುಷ್ಯ, ಜೀವಂತ ದಂತಕತೆಗೆ ಸ್ವಾಗತ!" ಎಂದು ಬರೆಯಲಾಗಿದೆ.
ಪೋಸ್ಟರ್ಗಳಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಅರುಲ್ಮೋಳಿ ಅವರ ಹೆಸರಿದೆಯಾದರೂ, ತಾನು ಆ ಪೋಸ್ಟರ್ಗಳನ್ನು ಹಾಕಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಅಲ್ಲದೆ, ಕೇಂದ್ರ ಸರ್ಕಾರದ ಲೋಗೋವನ್ನು ಪೋಸ್ಟರ್ ನಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ರಾಣಿಪೇಟೆಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಕೂಡ ಪೋಸ್ಟರ್ ಅನ್ನು ಪಕ್ಷದ ವತಿಯಿಂದ ಹಾಕಲಾಗಿಲ್ಲ ಎಂದಿದ್ದಾರೆ. ಅಲ್ಲದೆ, ಇದರ ಹಿಂದೆ ಕಿಡಿಗೇಡಿಗಳ ಕೈವಾಡದ ಕುರಿತು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಬಿಜೆಪಿ ಕಾರ್ಯಕರ್ತರೊಬ್ಬರು ಸಂಥಾನ ಭಾರತಿ ಅವರನ್ನು ಅಮಿತ್ ಶಾ ಎಂದು ತಪ್ಪಾಗಿ ಭಾವಿಸಿ ಪೋಸ್ಟರ್ ಅನ್ನು ಹಾಕಿದ್ದರು. ಈ ಬಗ್ಗೆ ನಟ ಸಂಥಾನ ಭಾರತಿ ಅವರು ಸಂದರ್ಶನವೊಂದರಲ್ಲಿ ಅಪಹಾಸ್ಯ ಮಾಡಿದ್ದರು.