ʼತಾರತಮ್ಯ ನಿಲ್ಲಿಸಿ': ವಯನಾಡ್ ಗೆ ವಿಶೇಷ ಫ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರಿಯಾಂಕಾ ಸೇರಿದಂತೆ ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

Screengrab:X/@ANI
ಹೊಸದಿಲ್ಲಿ: ಭೂಕುಸಿತದಿಂದ ಸಂತ್ರಸ್ತರಾದ ವಯನಾಡಿನ ಜನರಿಗೆ ವಿಶೇಷ ಆರ್ಥಿಕ ಫ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಸಂಸತ್ತಿನ ಮಕರ ದ್ವಾರದಲ್ಲಿ ಕೇರಳದ ವಿಪಕ್ಷದ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ʼವಯನಾಡಿಗೆ ನ್ಯಾಯ ಕೊಡಿ, ವಯನಾಡ್ ಗೆ ಪರಿಹಾರ ಪ್ಯಾಕೇಜ್ ಒದಗಿಸಿ’ ಎಂದು ಬರೆದಿರುವ ಬ್ಯಾನರ್ ಗಳನ್ನು ಹಿಡಿದುಕೊಂಡು ಕೇರಳದ ವಿರುದ್ಧ ತಾರತಮ್ಯ ನಿಲ್ಲಿಸಿ ಎಂದು ವಿಪಕ್ಷದ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಸರ್ಕಾರ ವಯನಾಡ್ ಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಲು ನಿರಾಕರಿಸುತ್ತಿರುವುದರಿಂದ ನಾವು ಆಘಾತಗೊಂಡಿದ್ದೇವೆ ಇದು ತೀವ್ರ ಸ್ವರೂಪದ ವಿಪತ್ತಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಲು ನಾವು ಪ್ರಧಾನಿ ಸೇರಿದಂತೆ ಎಲ್ಲರಲ್ಲೂ ವಿನಂತಿಸಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಇದೇ ರೀತಿಯ ದೊಡ್ಡ ಪ್ರಮಾಣದ ವಿನಾಶ ಸಂಭವಿಸಿದೆ, ಕೇಂದ್ರವು ಸಂತ್ರಸ್ತರಿಗೆ ಅಗತ್ಯವಿರುವ ನೆರವು ಮತ್ತು ಸಹಾಯವನ್ನು ನೀಡಬೇಕೆಂದು ಅವರು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಕೇವಲ ರಾಜಕೀಯಕ್ಕಾಗಿ ಕೇಂದ್ರ ಸರ್ಕಾರವು ಸಂತ್ರಸ್ತರಿಗೆ ನೀಡಬೇಕಾದುದನ್ನು ನೀಡಲು ನಿರಾಕರಿಸುತ್ತಿದೆ. ಅವರು ಕೂಡ ಭಾರತದ ಪ್ರಜೆಗಳು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.