ಚೂರಿ ಇರಿತ ಪ್ರಕರಣ: ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ ಬಾಲಿವುಡ್ ನಟ ಸೈಫ್ ಅಲಿ ಖಾನ್

ಮುಂಬೈ : ಚೂರಿ ಇರಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂದರ್ಭದಲ್ಲಿ ತನ್ನನ್ನು ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕನನ್ನು ಬಾಲಿವುಡ್ ನಟ ಸೈಫ್ ಅಲಿ ಖಾನ್ ಭೇಟಿ ಮಾಡಿದ್ದಾರೆ.
ನಟ ಸೈಫ್ ಅಲಿ ಖಾನ್ ಅವರು ಐದು ದಿನಗಳ ಚಿಕಿತ್ಸೆ ಬಳಿಕ ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಆ ಬಳಿಕ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ ಬಾಲಿವುಡ್ ನಟ ಸೈಫ್ ತ್ವರಿತವಾಗಿ ಸಹಾಯ ಮಾಡಿದ್ದಕ್ಕೆ ಆಟೋ ಚಾಲಕನಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನಟ ಸೈಫ್ ಅಲಿ ಖಾನ್ ರಿಕ್ಷಾ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಕ್ಕಾಗಿ ಭಜನ್ ಸಿಂಗ್ ರಾಣಾ ಅವರಿಗೆ 51,000 ರೂ.ಗಳನ್ನು ಆರ್ಥಿಕ ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಬಗ್ಗೆ ನೆನಪಿಸಿಕೊಂಡ ಭಜನ್ ಸಿಂಗ್ ರಾಣಾ, ಸೈಫ್ ಅವರ ನಿವಾಸವಾದ ಸತ್ಗುರು ನಿವಾಸ್ ಬಳಿ ಓರ್ವ ಮಹಿಳೆ ಭಯಭೀತರಾಗಿ ತಮ್ಮ ಆಟೋವನ್ನು ನಿಲ್ಲಿಸಿದ್ದಾರೆ. ಅದು ಸೈಫ್ ಅಲಿ ಖಾನ್ ಎಂದು ನನಗೆ ತಿಳಿದಿರಲಿಲ್ಲ. ಅವರು ಧರಿಸಿದ್ದ ಬಿಳಿ ಶರ್ಟ್ ರಕ್ತಸಿಕ್ತವಾಗಿತ್ತು. ನನಗೆ ಆತಂಕವಾಯಿತು. ಒಂದು ಮಗು ಮತ್ತು ಯುವಕ ಆಟೋದಲ್ಲಿ ಬಂದರು. ಆತಂಕದ ಮಧ್ಯೆಯೂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.