PMLA ಕಾಯ್ದೆಯ ದುರ್ಬಳಕೆ : ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಹೊಸದಿಲ್ಲಿ: ಆರೋಪಿಯನ್ನು ಜೈಲಿನಲ್ಲಿಡುವ ಉದ್ದೇಶದಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯಾ ಎಂದು ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ
ಛತ್ತೀಸ್ ಗಢದ ಮಾಜಿ ಅಬಕಾರಿ ಅಧಿಕಾರಿ ಅರುಣ್ ತ್ರಿಪಾಠಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು, ವರದಕ್ಷಿಣೆ ಕಾನೂನಿನಂತೆ ಈ ನಿಬಂಧನೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯಾ ಎಂದು ಪ್ರಶ್ನಿಸಿದೆ.
ಪಿಎಂಎಲ್ಎಯ ಪರಿಕಲ್ಪನೆಯು ವ್ಯಕ್ತಿಯನ್ನು ಜೈಲಿನಲ್ಲಿಯೇ ಇರುವಂತೆ ಮಾಡಲು ಸಾಧ್ಯವಿಲ್ಲ. ಸ್ವಯಂಪ್ರೇರಿತ ಪ್ರಕರಣ ರದ್ದುಗೊಂಡ ನಂತರವೂ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸುವ ಪ್ರವೃತ್ತಿಯಾಗಿದ್ದರೆ, ಇದಕ್ಕೆ ಏನು ಹೇಳಬಹುದು? 498ಎ ಪ್ರಕರಣಗಳಲ್ಲಿ ಏನಾಗಿದೆ ನೋಡಿ, ಪಿಎಂಎಲ್ ಎ ಕಾಯ್ದೆಯನ್ನು ಕೂಡ ಅದರಂತೆಯೇ ಬಳಸಲಾಗುತ್ತಿದೆಯಾ ಎಂದು ಪೀಠವು ಪ್ರಶ್ನಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A ವಿವಾಹಿತ ಮಹಿಳೆಯರನ್ನು ಅವರ ಪತಿ ಮತ್ತು ಅವರ ಸಂಬಂಧಿಕರಿಂದ ಕ್ರೌರ್ಯದಿಂದ ರಕ್ಷಿಸುತ್ತದೆ. ಈ ಕಾಯ್ದೆಯ ದುರುಪಯೋಗದ ಬಗ್ಗೆ ಇತ್ತೀಚೆಗೆ ನ್ಯಾಯಾಲಯ ಕಳವಳವನ್ನು ವ್ಯಕ್ತಪಡಿಸಿತ್ತು.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿದ ಛತ್ತೀಸ್ ಗಢ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಟೆಲಿಕಾಂ ಸೇವೆಗಳ ಅಧಿಕಾರಿ ಅರುಣ್ ತ್ರಿಪಾಠಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ(ಈಡಿ) ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಅರುಣ್ ತ್ರಿಪಾಠಿಗೆ ಜಾಮೀನು ನೀಡುವುದಕ್ಕೆ ವಿರೋಧಿಸಿದ್ದರು.