26/11 ಮುಂಬೈ ದಾಳಿ ಪ್ರಕರಣ | ತಹವ್ವರ್ ರಾಣಾನ ಶೀಘ್ರ ಗಡಿಪಾರಿಗೆ ಕಾರ್ಯವಿಧಾನಗಳ ಕುರಿತು ಅಮೆರಿಕದೊಂದಿಗೆ ಚರ್ಚೆ: ಎಂಇಎ

ರಣಧೀರ ಜೈಸ್ವಾಲ್ | ANI
ಹೊಸದಿಲ್ಲಿ: 28/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಕಿಸ್ತಾನ ಮೂಲದ ತಹವ್ವರ್ ರಾಣಾನ ಶೀಘ್ರ ಗಡಿಪಾರಿಗಾಗಿ ಕಾರ್ಯವಿಧಾನಗಳ ಕುರಿತು ಭಾರತವು ಅಮೆರಿಕದ ಜೊತೆ ಚರ್ಚಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ದ ವಕ್ತಾರ ರಣಧೀರ ಜೈಸ್ವಾಲ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
‘ಜ.21ರಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದೆ. ಇದರೊಂದಿಗೆ ಆತನ ಮೇಲ್ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿರುವಂತೆ ಕಾಣುತ್ತಿದೆ. ನಾವೀಗ ಭಾರತಕ್ಕೆ ಆತನ ಶೀಘ್ರ ಹಸ್ತಾಂತರಕ್ಕಾಗಿ ಕಾರ್ಯವಿಧಾನಗಳ ಕುರಿತು ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ ’ಎಂದರು.
ಭಾರತಕ್ಕೆ ರಾಣಾನ ಗಡಿಪಾರಿಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ತಾನು ಪರಿಶೀಲಿಸುತ್ತಿದ್ದೇನೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಜ.28ರಂದು ಹೇಳಿದ್ದು, 26/11ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ರೂವಾರಿಗಳನ್ನು ಶಿಕ್ಷೆಗೊಳಪಡಿಸುವ ಭಾರತದ ಪ್ರಯತ್ನಗಳನ್ನು ಅಮೆರಿಕವು ದೀರ್ಘಕಾಲದಿಂದ ಬೆಂಬಲಿಸುತ್ತಿದೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದರು.





