ದಿಲ್ಲಿಯಲ್ಲಿ ಮತದಾರ ಪಟ್ಟಿಯಿಂದ ಸಾವಿರಾರು ಮತದಾರರನ್ನು ಕೈಬಿಡಲಾಗಿದೆ : ಅರವಿಂದ್ ಕೇಜ್ರಿವಾಲ್ ಆರೋಪ

ಅರವಿಂದ್ ಕೇಜ್ರಿವಾಲ್ | PC : PTI
ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರ ಪಟ್ಟಿಯಿಂದ ಭಾರೀ ಸಂಖ್ಯೆಯ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆಯೆಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಆಪಾದಿಸಿದ್ದಾರೆ.
ಶಾಹದರ, ಜನಕಪುರಿ, ಲಕ್ಷ್ಮೀ ನಗರ ಮತ್ತಿತರ ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿಯು ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿತ್ತು.
‘‘ಶಾಹದರಾ ಪ್ರದೇಶದಲ್ಲಿರುವ 11,018 ಮತದಾದರ ಹೆಸರುಗಳನ್ನು ಅಳಿಸಿಹಾಕುವಂತೆ ಬಿಜೆಪಿ ಅರ್ಜಿಯನ್ನು ಸಲ್ಲಿಸಿದೆ. ಆದರೆ ಅರ್ಜಿಯಲ್ಲಿರುವ 500 ಮಂದಿಯ ಹೆಸರುಗಳನ್ನು ಪರಿಶೀಲಿಸಿದಾಗ ಅವರ ಪೈಕಿ ಶೇ.75ರಷ್ಟು ಮಂದಿ ಅಲ್ಲಿ ಈಗಲೂ ವಾಸವಾಗಿದ್ದಾರೆ. ಆದರೆ ಅವರ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯಿದೆ” ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ಶಹದಾರಾ ವಿಧಾನಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷವು 5 ಸಾವಿರ ಮತಗಳಿಂದ ಗೆದ್ದುಕೊಂಡಿತ್ತು. ಈಗ ಆ ಕ್ಷೇತ್ರದ ಸುಮಾರು 11 ಸಾವಿರ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಇವರಲ್ಲಿ ಬಹುತೇಕ ಮಂದಿ ಆಪ್ ಬೆಂಬಲಿಗರೆಂದು ಅವರು ಹೇಳಿದ್ದಾರೆ.
ಪಾರದರ್ಶಕತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಅದರ ವೆಬ್ಸೈಟ್ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಕೋರಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಅಪ್ಲೋಡ್ ಮಾಡಬೇಕೆಂದು ಕೇಜ್ರಿವಾಲ್ ಆಗ್ರಹಿಸಿದರು.