ಉತ್ತರ ಪ್ರದೇಶ | ಸಹೋದರಿಯ ವಿಚ್ಛೇದನಕ್ಕಾಗಿ ವಾದಿಸುತ್ತಿದ್ದ ವಕೀಲನ ಅಪಹರಿಸಿ ಹತ್ಯೆ; ಭಾವ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರ ಪ್ರದೇಶದ ಬಸ್ತಿಯಲ್ಲಿ ವಕೀಲರೊಬ್ಬರನ್ನು ಅಪಹರಿಸಿ, ವಾಹನ ಹತ್ತಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಭಾವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣದ ಬಗ್ಗೆ ನಮಗೆ ಮಾಹಿತಿ ಸಿಗುವ ಹೊತ್ತಿಗೆ, ʼಆರೋಪಿಗಳು ಚಂದ್ರಶೇಖರ್ ಯಾದವ್ ಅವರನ್ನು ಥಳಿಸಿ, ವಾಲ್ಟರ್ಗಂಜ್ ಪ್ರದೇಶದಲ್ಲಿ ರಸ್ತೆಗೆ ಎಸೆದು, ನಂತರ ಅವರ ಮೇಲೆ ವಾಹನ ಹರಿಸಿ ಪರಾರಿಯಾಗಿದ್ದಾರೆʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಕೀಲರು ತಮ್ಮ ಸಹೋದರಿ ಮತ್ತು ಆಕೆಯ ಪತಿ ರಂಜಿತ್ ಯಾದವ್ ಅವರ ವಿಚ್ಛೇದನ ಪ್ರಕರಣವನ್ನು ವಾದಿಸುತ್ತಿದ್ದರು. ಅದಕ್ಕೆ ಸಂಬಂಧಿಸಿ ಅಪರಾಧ ಎಸಗಲಾಗಿದೆ ಎಂದು ಬಸ್ತಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಅವರು ಹೇಳಿದ್ದಾರೆ. ವಿಚ್ಛೇದನ ಇತ್ಯರ್ಥದ ಆರ್ಥಿಕ ಅಂಶಕ್ಕೆ ಸಂಬಂಧಿಸಿದಂತೆ ರಂಜಿತ್ ಯಾದವ್ ಮತ್ತು ಅವರ ಸಹೋದರ ಸಂದೀಪ್ ವಕೀಲರನ್ನು ಅಪಹರಿಸಿ ಕೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರಂಜಿತ್ ಯಾದವ್ ನನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.