ಪಶ್ಚಿಮ ಬಂಗಾಳ | ಸದನದಲ್ಲಿ ಅಶಿಸ್ತಿನ ವರ್ತನೆ ಆರೋಪ ; ಸುವೇಂಧು ಅಧಿಕಾರಿ ಸಹಿತ ಬಿಜೆಪಿಯ ನಾಲ್ವರು ಶಾಸಕರ ಅಮಾನತು

ಸುವೇಂದು | PTI
ಕೋಲ್ಕತಾ: ಸದನದಲ್ಲಿ ಅಶಿಸ್ತಿನ ಆರೋಪದಲ್ಲಿ ಪಶ್ಚಿಮಬಂಗಾಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಹಾಗೂ ಇತರ ಮೂವರು ಬಿಜೆಪಿ ಶಾಸಕರನ್ನು ಬಜೆಟ್ ಅಧಿವೇಶನದಿಂದ ಸ್ಪೀಕರ್ ಅವರು ಸೋಮವಾರ ಅಮಾನತುಗೊಳಿಸಿದ್ದಾರೆ.
ಪಶ್ಚಿಮಬಂಗಾಳ ವಿಧಾನ ಸಭೆಯ ಅಧಿವೇಶನದ ಅಂತ್ಯದ ವರೆಗೆ ಸುವೇಂದು ಅಧಿಕಾರಿಯಲ್ಲದೆ ಅಗ್ನಿಮಿತ್ರ ಪಾಲ್, ಬಂಕಿಮ್ ಘೋಷ್ ಹಾಗೂ ಬಿಸ್ವನಾಥ್ ಕರಕ್ ಅವರನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅಮಾನತುಗೊಳಿಸಿದ್ದಾರೆ.
ಅಗ್ನಿಮಿತ್ರ ಪಾಲ್ ಮಂಡಿಸಿದ ನಿಲುವಳಿ ಸೂಚನೆ ಕುರಿತು ಚರ್ಚೆ ನಡೆಸಲು ಸ್ಪೀಕರ್ ನಿರಾಕರಿಸಿದ ಬಳಿಕ ಸುವೇಂಧು ಅಧಿಕಾರಿ ನೇತೃತ್ವದ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಪ್ರವೇಶಿಸಿದರು. ಕಲಾಪಗಳ ಕಾಗದ ಪತ್ರಗಳನ್ನು ಹರಿದು ಎಸೆದರು. ಅನಂತರ ಸಭಾ ತ್ಯಾಗ ಮಾಡಿದರು.
ಈ ತಿಂಗಳ ಆರಂಭದಲ್ಲಿ ಸರಸ್ವತಿ ಪೂಜೆ ಆಯೋಜಿಸುವ ಕುರಿತಂತೆ ರಾಜ್ಯದ ಕೆಲವು ಸ್ಥಳಗಳಲ್ಲಿ ಬೆದರಿಕೆ ಇದೆ ಎಂದು ಆರೋಪಿಸಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತು.
ಅನಂತರ ಪಾಲ್ ಅವರು ವಿಧಾನ ಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಕತ್ತಾ ಉಚ್ಚ ನ್ಯಾಯಾಲಯಲದ ಆದೇಶದೊಂದಿಗೆ ಕೋಲ್ಕತ್ತಾದ ಕಾನೂನು ಕಾಲೇಜು ಸೇರಿದಂತೆ ರಾಜ್ಯದ ಕೆಲವು ಸ್ಥಳಗಳಲ್ಲಿ ಪೊಲೀಸ್ ರಕ್ಷಣೆಯಲ್ಲಿ ಸರಸ್ವತಿ ಪೂಜೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ತಾನು ಹಾಗೂ ಪಕ್ಷದ ಇತರ ಕೆಲವು ಶಾಸಕರು ಮಂಡಿಸಿದ ನಿಲುವಳಿ ಸೂಚನೆ ಕುರಿತು ಚರ್ಚಿಸಲು ಸ್ಪೀಕರ್ ನಿರಾಕರಿಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಶಾಸಕರು ಸಭಾತ್ಯಾಗ ನಡೆಸಿದರು ಎಂದು ಅವರು ತಿಳಿಸಿದ್ದಾರೆ.
ಸ್ವೀಕರ್ ಅಗ್ನಿಮಿತ್ರ ಪಾಲ್ ಅವರಿಗೆ ನಿಲುವಳಿ ಸೂಚನೆಯನ್ನು ಓದಲು ಅವಕಾಶ ನೀಡಿದರು. ಆದರೆ, ಸದನದಲ್ಲಿ ಅದರ ಬಗ್ಗೆ ಚರ್ಚಿಸಲು ಅನುಮತಿ ನಿರಾಕರಿಸಿದರು. ಅಗ್ನಿಮಿತ್ರ ಪಾಲ್ ಅವರು ಸದನದಲ್ಲಿ ನಿಲುವಳಿ ಸೂಚನೆ ಓದಿದ ಬಳಿಕ ಬಿಜೆಪಿ ಶಾಸಕರು ಪ್ರತಿಭಟನೆ ಆರಂಭಿಸಿದರು. ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು.