ಎ.18: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ನಲ್ಲಿ ಪ್ರತಿಭಟನೆ

ಮಂಗಳೂರು,ಎ.17: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ನಲ್ಲಿ ಎ.18ರಂದು ಅಪರಾಹ್ನ 3ಕ್ಕೆ ಪ್ರತಿಭಟನಾ ಸಮಾವೇಶ ನಡೆಯಲಿದೆ.
ದ.ಕ. ಮತ್ತು ಉಡುಪಿ ಜಿಲ್ಲಾ ಖಾಝಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಪ್ರತಿಭಟನಾ ಸಮಾವೇಶಕ್ಕೆ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೆ ಸುಮಾರು ಎರಡು ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಉಲಮಾಗಳು ಬೃಹತ್ ಸಮಾವೇಶದ ನೇತೃತ್ವ ವಹಿಸಿದ್ದಾರೆ. ಸಮಾವೇಶದಲ್ಲಿ ಬೈಕ್ ರ್ಯಾಲಿ, ಯಾವುದೇ ಸಂಘಟನೆಯ ಅಥವಾ ಹಸಿರು ಬಾವುಟ, ಘೋಷಣೆಗಳಿಗೆ ಅವಕಾಶವಿಲ್ಲ. ಅಪರಾಹ್ನ 3 ಗಂಟೆಗೆ ಜನರು ಶಾ ಗಾರ್ಡನ್ ತಲುಪಬೇಕು. ಭಾರತದ ರಾಷ್ಟ್ರಧ್ವಜ ಕಟ್ಟಿಕೊಂಡು ಬರುವ ವಾಹನ ಗಳಿಗೆ ಮಾತ್ರ ಪ್ರವೇಶವಿದೆ. ಬಸ್ಸುಗಳಲ್ಲಿ ಬರುವವರಿಗೆ ಸಮಾವೇಶಕ್ಕೆ ಬರಲು ಪಂಪ್ವೆಲ್ ಮತ್ತು ಬಿ.ಸಿ.ರೋಡ್ನಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ವಿಶಾಲ ಪಾರ್ಕಿಂಗ್, ಎರಡು ಬಾರಿ ನಮಾಝ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.