ಎ.18: ತಮಿಳು ಲೇಖಕರೊಂದಿಗೆ ಸಂವಾದ
Update: 2025-04-17 23:12 IST
ಮಂಗಳೂರು, ಎ.17: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಸಹಕಾರದೊಂದಿಗೆ ತಮಿಳು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಎ.18ರಂದು 3ಕ್ಕೆ ನಗರದ ಉರ್ವಸ್ಟೋರ್ನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ.
ತಮಿಳುನಾಡಿನಿಂದ ಆಗಮಿಸುವ ಲೇಖಕರ ತಂಡವು ತುಳು ಭವನಕ್ಕೆ ಭೇಟಿ ನೀಡಲಿದೆ. ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದು, ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಕೊಂಕಣಿ ಅಕಾಡಮಿಯ ಸದಸ್ಯ ಸಮರ್ಥ್ ಉಪಸ್ಥಿತರಿರುವರು.
ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ಉಡುಪಿ ಇದರ ಅಧ್ಯಕ್ಷ ಪ್ರೊ.ಎಸ್.ಎ. ಕೃಷ್ಣಯ್ಯ, ತುಳುನಾಡು ಮತ್ತು ತಮಿಳುನಾಡಿನ ಭಾಂದವ್ಯ ಇತಿಹಾಸ ಮತ್ತು ಪರಂಪರೆ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸುವರು. ನಂತರ ತುಳು, ಬ್ಯಾರಿ ಮತ್ತು ಕೊಂಕಣಿ ಭಾಷೆಯ ಹಾಡು ಮತ್ತು ಭಾಷೆಗಳ ಬಗ್ಗೆ ಮಾಹಿತಿ ವಿನಿಮಯ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.