ಹಕ್ಕು ಪತ್ರ ಪಡೆದವರಿಗೆ ನಿವೇಶನ ನೀಡದೆ ವಂಚನೆ ಆರೋಪ : ಗುರುಪುರ ನಾಡ ಕಚೇರಿ ಮುಂಭಾಗ ಸಂತ್ರಸ್ತರ ಪ್ರತಿಭಟನೆ

ಮಂಗಳೂರು : ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕು ಪತ್ರ ಪಡೆದ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಏಳು ವರ್ಷಗಳು ಕಳೆದರೂ ನಿವೇಶನ ಒದಗಿಸದೆ ವಂಚಿಸಲಾಗಿದೆ ಎಂದು ಆರೋಪಿಸಿ ಸಂತ್ರಸ್ತರು ಕುಪ್ಪೆಪದವು ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುಪುರ ನಾಡ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
2018 ರಲ್ಲಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ತರಾತುರಿಯುಲ್ಲಿ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ನಿವೇಶನಗಳನ್ನು ಗುರುತು ಮಾಡಲಾಗಿತ್ತು. ನಿವೇಶನ ಒದಗಿಸದೆ ಬಡ ನಿವೇಶನ ರಹಿತರನ್ನು ಸತಾಯಿಸಲಾಗುತ್ತಿತ್ತು. ಕಳೆದ ಜನವರಿಯಲ್ಲಿ ಸಂತ್ರಸ್ತರು ಹೋರಾಟ ಸಮಿತಿ ರಚಿಸಿಕೊಂಡು ಜಮೀನು ಸ್ವಾಧೀನ ನೀಡುವಂತೆ ಹೋರಾಟ ಆರಂಭಿಸಿದ್ದರು. ಈ ಕುರಿತು ಜನವರಿಯಲ್ಲಿ ಕುಪ್ಪೆಪದವು ಪಂಚಾಯತ್ ಮುಂಭಾಗ ನಡೆದ ಧರಣಿಯಲ್ಲಿ ಮನವಿ ಸ್ವೀಕರಿಸಲು ಆಗಮಿಸಿದ ಡೆಪ್ಯುಟಿ ತಹಶೀಲ್ದಾರ್, ಫೆಬ್ರವರಿ ಕೊನೆಯಲ್ಲಿ ನಿವೇಶನ ಸ್ವಾಧೀನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರಿಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ನಿವೇಶನ ಸ್ವಾಧೀನ ನೀಡಲು ತಾಂತ್ರಿಕ ಸಮಸ್ಯೆಗಳು ಇವೆ ಎಂದು ಹೇಳಿದಾಗ ಅಸಮಾಧಾನಗೊಂಡ ಪ್ರತಿಭಟನಾಕಾರರು ಗ್ರಾಮಪಂಚಾಯತ್ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಿ, ಗುರುತಿಸಿರುವ ಜಮೀನನ್ನು ನೇರ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವುದಾಗಿ ಹೇಳಿದರು.
ಪ್ರತಿಭಟನಾ ಪ್ರದರ್ಶನವನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು. ಕಾರ್ಮಿಕ ಮುಂದಾಳುಗಳಾದ ಸದಾಶಿವ ದಾಸ್, ನೋಣಯ್ಯ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿವೇಶನ ರಹಿತರ ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ವಲಯ ಅಧ್ಯಕ್ಷ ಬಾಬು ಸಾಲ್ಯಾನ್, ಗುರುಪುರ ವಲಯ ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ಹೊನ್ನಯ್ಯ ಅಮೀನ್, ವಾರಿಜ ಕುಪ್ಪೆಪದವು, ಹೋರಾಟ ಸಮಿತಿಯ ಸದಾಶಿವ ಕಟ್ಟೆಮಾರ್, ಜಮೀಲಾ ಮಾಣಿಪಳ್ಳ, ಮಜೀದ್ ಕಲ್ಲಾಡಿ, ಕುಸುಮಾ ಕುಪ್ಪೆಪದವು, ರಜಿಯಾ ಮಾಣಿಪಳ್ಳ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
