ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸ್ಪೀಕರ್ ಯು.ಟಿ. ಖಾದರ್, ಸಚಿವರು, ಅಧಿಕಾರಿಗಳ ಸಭೆ

Update: 2023-09-01 16:55 GMT

ಮಂಗಳೂರು, ಸೆ.1: ದ.ಕ. ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಮೀನುಗಾರರ ಸಮಸ್ಯೆಗಳ ಬಗ್ಗೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಶುಕ್ರವಾರ ರಾಜ್ಯ ವಿಧಾನ ಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆದು ವಿಸ್ತೃತ ಚರ್ಚಿಸಲಾಯಿತು.

ಜಿಲ್ಲೆಯಲ್ಲಿ 3,406 ದೋಣಿಗಳ ಪೈಕಿ 1,660 ಮೋಟಾರೀಕೃತ ದೋಣಿಗಳು, 1,432 ಯಾಂತ್ರೀಕೃತ ದೋಣಿಗಳು, 314 ನಾಡ ದೋಣಿಗಳು ನೋಂದಣಿಯಾಗಿ ಕಾರ್ಯಚರಿಸುತ್ತಿವೆ. ಯಾಂತ್ರೀಕೃತ ದೋಣಿಗಳಿಗೆ ಈವರೆಗೆ ವಾರ್ಷಿಕ ಮಿತಿ 1.50 ಲಕ್ಷ ಕಿಲೋ ಲೀಟರ್ ಕರ ರಹಿತ ಡೀಸಲ್ ವಿತರಿಸಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ಯಾಂತ್ರೀಕೃತ ದೋಣಿಗಳಿಗೆ ವಾರ್ಷಿಕ ಮಿತಿ 1.50 ಲಕ್ಷ ಕಿಲೋ ಲೀಟರ್‌ನಿಂದ 2.00 ಲಕ್ಷ ಕಿಲೋ ಲೀಟರ್‌ವರೆಗೆ ಹೆಚ್ಚಿಸಿ ಕರ ಡೀಸಲ್‌ನ್ನು ವಿತರಿಸಲು ಆದೇಶಿಸಲಾಗಿದೆ.

ಕೇಂದ್ರ ಸರಕಾರದಿಂದ ಪಡಿತರ ದರದ ಸೀಮೆಎಣ್ಣೆಯು ಅಗತ್ಯ ಪ್ರಮಾಣ ಮತ್ತು ಅವಶ್ಯಕತೆಯಿರುವಾಗ ಬಿಡುಗಡೆ ಯಾಗುತ್ತಿಲ್ಲ. ಹಾಗಾಗಿ ರಾಜ್ಯ ಸರಕಾರವು ನಾಡದೋಣಿ ಮಾಲಕರಿಗೆ ನಿರಂತರವಾಗಿ ರಾಜ್ಯದ ಅನುದಾನದಲ್ಲಿ ಸೀಮೆಎಣ್ಣೆ ಪೂರೈಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಸೀಮೆಎಣ್ಣೆಯನ್ನು ಖರೀದಿಸಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ(ನಿ)ದ ಮೂಲಕ ನಾಡದೋಣಿ ಮಾಲಕರಿಗೆ ಸರಬರಾಜು ಮಾಡಲು ಹೊಸ ವ್ಯವಸ್ಥೆ ಯನ್ನು ಜಾರಿಗೆ ತರಲು ಸೂಚಿಸಲಾಗಿದೆ. ಕೈಗಾರಿಕಾ ಸೀಮೆಎಣ್ಣೆಯನ್ನು ಖರೀದಿಸುವ ನಾಡದೋಣಿ ಮಾಲಕರಿಗೆ ಪ್ರತಿ ಲೀಟರ್‌ಗೆ 35ರೂ.ನಂತೆ ರಿಯಾಯಿತಿ ನೀಡಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ 49.50 ಕೋ.ರೂ.ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಂಪುಟ ಸಭೆಯ ಅನುಮೋದನೆ ಪಡೆಯಬೇಕಾಗಿರುತ್ತದೆ.

ಮಂಗಳೂರು ಮೀನುಗಾರಿಕೆ ಬಂದರಿನ ವಾರ್ಫ್ ಮತ್ತು ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿಗೆ 2.50 ಕೋ.ರೂ. ಅನುದಾನ ಒದಗಿಸಲಾಗಿದ್ದು, ಈ ತಿಂಗಳಲ್ಲಿ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಬಂದರು ಇಲಾಖೆಯು 29 ಕೋ.ರೂ. ಅನುದಾನದಿಂದ ಹೂಳತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾರ್ಯಾದೇಶ ನೀಡಲು ಬಾಕಿ ಇರುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳಿಗೆ ಜಟ್ಟಿ ನಿರ್ಮಿಸಲು 6.50 ಕೋ.ರೂ. ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಎನ್‌ಸಿಆರ್ ಎಂಪಿ ಯೋಜನೆಯಡಿ ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿರುವ 14 ಕೊಂಡಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಇದರ ದುರಸ್ತಿಗಾಗಿ 15 ಕೋ.ರೂ. ಅಗತ್ಯವಿದೆ. ಬಂದರುಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರ್ಥಿಕ ಬಲ ನೀಡುವ ಸಲುವಾಗಿ ದೋಣಿ ಮಾಲಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಅಧಿಕಾರಿಗಳು ಸಭೆಯ ಗಮನ ಸೆಳೆದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ನದಿ ಮತ್ತು ಸಮುದ್ರಕ್ಕೆ ಬಿಡುವುದರಿಂದ ಮೀನಿನ ತಳಿ ನಶಿಸುತ್ತಿದೆ. ಈ ಬಗ್ಗೆ ಮೀನುಗಾರಿಕೆ ಇಲಾಖೆಯಿಂದ ಮೀನು ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ನೇತ್ರಾವತಿ ನದಿ ಹಿನ್ನೀರಿನಲ್ಲಿ 6,129, ಫಲ್ಗುಣಿ ನದಿ ಹಿನ್ನೀರಿನಲ್ಲಿ 5000, ಶಾಂಭವಿ ನದಿ ಹಿನ್ನೀರಿನಲ್ಲಿ 5000 ಸಮುದ್ರ ಆಧಾರಿತ ತಳಿಯ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ.

ಮೀನುಗಾರಿಕಾ ದೋಣಿಗಳಲ್ಲಿನ ಸೀಮೆಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್/ಡೀಸಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. 2023-24ನೇ ಸಾಲಿನಲ್ಲಿ 4000 ಸೀಮೆಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋ.ರೂ. ಸಹಾಯಧನ ಒದಗಿಸಲಾಗಿರುತ್ತದೆ.

ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 2023-24ನೇ ಸಾಲಿನಿಂದ 50,000 ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಕುಳಾಯಿ ಮೀನುಗಾರಿಕೆ ಬಂದರಿನ ನಿರ್ಮಾಣವನ್ನು ಎನ್‌ಎಂಪಿಟಿ ಮೂಲಕ ಕೈಗೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಶೇ.50ರಷ್ಟು ಮೊತ್ತವನ್ನು ಎನ್‌ಎಂಪಿಟಿಗೆ ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್ ಬಳಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News