ಕುಡುಪು ಗುಂಪು ಹತ್ಯೆ | ನನ್ನ ಅಣ್ಣ ಮಾನಸಿಕ ಅಸ್ವಸ್ಥನಾಗಿ ಊರೂರು ಸುತ್ತುತ್ತಿದ್ದ: ಅಶ್ರಫ್ ಸಹೋದರ

ಮಂಗಳೂರಿನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಅಂತಿಮ ವಿಧಿವಿಧಾನದ ಬಳಿಕ ಅಶ್ರಫ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಮಂಗಳೂರು: "ನನ್ನ ಅಣ್ಣ ಅಶ್ರಫ್ ನಿಗೆ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆ ಇತ್ತು. ಆತ ಅವಿವಾಹಿತ. ಮಾನಸಿಕ ಸಮಸ್ಯೆ ಇದ್ದುದರಿಂದ ಊರೂರು ಸುತ್ತುತ್ತಿದ್ದ. ನಾವು ಆತನ ಸಮಸ್ಯೆಗೆ ಚಿಕಿತ್ಸೆ ಕೊಡಿಸಿದ್ದೇವು. ಆದರೂ ಆತನ ಆರೋಗ್ಯ ಸಮಸ್ಯೆ ನಿವಾರಣೆ ಆಗಿರಲಿಲ್ಲ" ಎಂದು ಕುಡುಪುವಿನಲ್ಲಿ ಗುಂಪಿನಿಂದ ಥಳಿಸಲ್ಪಟ್ಟು ಕೊಲೆಯಾದ ಅಶ್ರಫ್ ಬಗ್ಗೆ ಅವರ ಸಹೋದರ ಅಬ್ದುಲ್ ಜಬ್ಬಾರ್ ತಿಳಿಸಿದ್ದಾರೆ.
ಕುಡುಪು ಬಳಿ ಕೊಲೆಯಾದ ವ್ಯಕ್ತಿಗೂ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಭಾವಚಿತ್ರಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರೊಂದಿಗೆ ಮಂಗಳೂರಿಗೆ ಆಗಮಿಸಿರುವ ಅಬ್ದುಲ್ ಜಬ್ಬಾರ್ 'ವಾರ್ತಾಭಾರತಿ' ಜೊತೆ ಮಾತನಾಡುತ್ತಿದ್ದರು.
"ನಾನು ಎರ್ನಾಕುಲಂ ನಲ್ಲಿ ಇರುವುದು. ಅಲ್ಲಿಗೆ ಅಣ್ಣ ಕೆಲವೊಮ್ಮೆ ಬರುತಿದ್ದ. ಬಂದಾಗ ಬಟ್ಟೆ, ಮೊಬೈಲ್ ಕೊಡುತ್ತಿದ್ದೆ. ಅದನ್ನು ಎಲ್ಲೆಲ್ಲೋ ಬಿಟ್ಟು ಬರುತ್ತಿದ್ದ. ನನ್ನ ಹೆಸರಿನಲ್ಲೇ ನಾನು ಅವನಿಗೆ ಸಿಮ್ ತೆಗೆದು ಕೊಡುತ್ತಿದ್ದೆ. ಇತ್ತೀಚೆಗೆ ನನ್ನ ಬಳಿ ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದ. ವಯನಾಡಿನಲ್ಲಿರುವ ನಮ್ಮ ಮನೆಗೆ ಅಮ್ಮನನ್ನು ನೋಡಲು ಬರುತ್ತಿದ್ದ. ಕಳೆದ ಈದುಲ್ ಫಿತ್ರ್ ಗೆ ಮನೆಗೆ ಬಂದಿದ್ದ. ಹಲವು ವರ್ಷಗಳಿಂದ ಮಂಗಳೂರಿನಲ್ಲೇ ವಾಸ ಮಾಡುತ್ತಿದ್ದ" ಎಂದು ಜಬ್ಬಾರ್ ಮಾಹಿತಿ ನೀಡಿದರು.
"ಪೊಲೀಸರು ಈಗಾಗಲೇ 20 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಮಾನಸಿಕ ಸಮಸ್ಯೆ ಇದ್ದ ನನ್ನ ಸಹೋದರನಿಗೆ ಈಗ ಈ ಸ್ಥಿತಿ ಬಂತು. ಪ್ರಕರಣದ ತನಿಖೆಗೆ ನಾವು ಪೊಲೀಸರೊಂದಿಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತೇವೆ" ಎಂದು ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.