ಹುಬ್ಬಳ್ಳಿ ಎನ್ಕೌಂಟರ್: ಪ್ರಕರಣದ ಸಮಗ್ರ ತನಿಖೆಗೆ ವುಮೆನ್ ಇಂಡಿಯಾ ಮೂಮೆಂಟ್ ಒತ್ತಾಯ

ಮಂಗಳೂರು : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆಗೈದಿರುವ ಪೈಶಾಚಿಕ ಕೃತ್ಯವು ಅತ್ಯಂತ ಹೇಯವಾಗಿದ್ದು, ನಾಗರಿಕ ಸಮಾಜವನ್ನು ಇದು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಗಳು ನಿರಂತರ ಮರುಕಳಿಸುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ರಾಜ್ಯದಲ್ಲಿ ಸುರಕ್ಷಿತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಅತ್ಯಾಚಾರ ಪ್ರಕರಣಗಳ ಸೂಕ್ತ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದಿರುವುದೇ ಇಂತಹ ಘಟನೆಗಳು ಮರುಕಳಿಸಲು ಪ್ರಮುಖ ಕಾರಣವಾಗಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಪೋಲೀಸರು ಎನ್ಕೌಂಟರ್ ನಡೆಸಿ ಹತ್ಯೆಗೈದಿರುವುದು ಅಸಾಂವಿಧಾನಿಕವಾಗಿದೆ. ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಮ್ ರಾಜ್ಯಾಧ್ಯಕ್ಷ ಫಾತಿಮಾ ನಸೀಮಾ ಒತ್ತಾಯಿಸಿದ್ದಾರೆ.
ದೇಶದಲ್ಲಿ ಪ್ರತಿರೋಧವನ್ನು ಹತ್ತಿಕ್ಕಲು ಪೊಲೀಸರು ಎನ್ಕೌಂಟರ್ನ್ನು ದೊಡ್ಡ ಅಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ. ಎನ್ಕೌಂಟರ್ ಎಂದಿಗೂ ಸಮರ್ಥನಿಯವಲ್ಲ. ಆರೋಪಿ ತಪ್ಪಿಸಲು ಅಥವಾ ದಾಳಿ ಮಾಡಲು ಯತ್ನಿಸುವಾಗ ಸೊಂಟದ ಕೆಳಗೆ ಗುಂಡು ಹಾರಿಸಲು ಕಾನೂನಾತ್ಮಕವಾಗಿ ಪೊಲೀಸರಿಗೆ ಹಕ್ಕಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರ ನಡೆಯು ಅನುಮಾನಕ್ಕೆಡೆ ಮಾಡಿದೆ. ಸಚಿವ ಸಂಪುಟ ಸದಸ್ಯರು ಪೊಲೀಸರನ್ನು ಬೆಂಬಲಿಸಿ ನೀಡಿರುವ ಬಾಲಿಶ ಹೇಳಿಕೆಗಳು ಪೊಲೀಸರನ್ನು ರಕ್ಷಿಸುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.