ಮನಪಾ ಅಧಿಕಾರಿಗಳಿಂದ ತ್ಯಾಜ್ಯ ವಿಂಗಡಣೆ ಪರಿಶೀಲನೆ

ಮಂಗಳೂರು, ಎ. 23: ತ್ಯಾಜ್ಯ ಉತ್ಪತ್ತಿ ಸ್ಥಳದಿಂದಲೇ ಹಸಿ, ಒಣ ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕೆಂಬ ನಿಯಮ ಪಾಲನೆಗೆ ವಿಫಲವಾಗಿರುವ ನಗರದ ಹೊಟೇಲ್, ಬಾರ್ ಎಂಡ್ ರೆಸ್ಟೋರೆಂಟ್ಗಳು ಸೇರಿದಂತೆ ಸಾರ್ವಜನಿಕ ಕಸ ಉತ್ಪತ್ತಿ ಸ್ಥಳಗಳ ಮೇಲೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಮಂಗಳೂರು ಮಹಾನಗರ ಪಾಲಿಕೆ ಮುಂದುವರಿಸಿದೆ.
ಪರಿಶೀನೆಯ ಮುಂದುವರಿದ ಭಾಗವಾಗಿ ಬುಧವಾರ ನಗರದ ಕೊಟ್ಟಾರ, ಉರ್ವಸ್ಟೋರ್ಗಳಲ್ಲಿ ದಾಳಿ ನಡೆಸಿರುವ ಮನಪಾ ಆಯುಕ್ತ ರವಿಚಂದ್ರ ನಾಯ್ಕ್ ನೇತೃತ್ವದ ಅಧಿಕಾರಿಗಳ ತಂಡ ಮೂಲದಲ್ಲೇ ತ್ಯಾಜ್ಯ ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡದ ಹೊಟೇಲ್ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ತಲಾ 5000 ರೂ. ದಂಡ ವಿಧಿಸಿದೆ.
ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಮೊದಲ ಬಾರಿಗೆ ಎಚ್ಚರಿಕೆ ಕ್ರಮವಾಗಿ 5000 ರೂ. ಬಳಿಕ 25000 ರೂ. ಅದರ ಬಳಿಕವೂ ತ್ಯಾಜ್ಯ ವಿಂಗಡನೆಗೆ ಸಂಬಂಧಪಟ್ಟವರು ಕ್ರಮ ವಹಿಸದಿದ್ದರೆ, ಪರವಾನಿಗೆ ರದ್ದುಗೊಳಿಸುವ ಪ್ರಕ್ರಿಯೆಯನ್ನೂ ನಡೆಸುವುದಾಗಿ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.