ವಾಮನ ನಂದಾವರರ ಅಧ್ಯಯನದಲ್ಲಿ ವೈಜ್ಞಾನಿಕ ಶಿಸ್ತು ಮತ್ತು ಹಳ್ಳಿಯ ಸೊಗಡು: ಪ್ರೊ. ವಿವೇಕ ರೈ

ಮಂಗಳೂರು: ಡಾ. ವಾಮನ ನಂದಾವರ ಅವರ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ಶಿಸ್ತುವಿನ ಜೊತೆಗೆ ಹಳ್ಳಿಯ ಸೊಗಡು ಕೂಡ ಇತ್ತು, ಸಂಶೋಧಕನ ಸಹಜ ಚಿಂತನಾ ದೃಷ್ಟಿಕೋನ ಹಾಗೂ ಕವಿತೆ ಕಟ್ಟುವ ಕವಿತ್ವದ ಸಮಚಿತ್ತ ಅವರದ್ದಾಗಿತ್ತು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ಅಕಾಡಮಿಯ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಅವರಿಗೆ ತುಳುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ವಾಮನ ನಂದಾವರ ಅವರ ʼಕೋಟಿ ಚೆನ್ನಯ ಗ್ರಂಥವು ಅತ್ಯಂತ ತಳಸ್ಪರ್ಶಿ ಕ್ಷೇತ್ರ ಕಾರ್ಯದ ಅಧ್ಯಯನದ ಮೂಲಕ ಪ್ರಕಟಗೊಂಡ ಶ್ರೇಷ್ಠ ಕೃತಿಯಾಗಿದೆ. ಕೋಟಿ ಚೆನ್ನಯರ ಬಗ್ಗೆ ಹಾಗೂ ತುಳು ಜಾನಪದ ಅಧ್ಯಯನ ಸಲುವಾಗಿ ಬಂದಂತಹ ಅಂತರಾಷ್ಟ್ರೀಯ ಸಂಶೋಧಕರೆಲ್ಲರೂ ಡಾ.ವಾಮನ ನಂದಾವರ ಅವರನ್ನು ಎಲ್ಲಾ ಸಂದರ್ಭದಲ್ಲೂ ಉಲ್ಲೇಖಿಸಿರುತ್ತಾರೆ ಅನ್ನುವುದು ಅವರ ಅಧ್ಯಯನಕ್ಕೆ ಸಂದ ಗೌರವವಾಗಿದೆ ಎಂದು ಪ್ರೊ. ಬಿ.ಎ.ವಿವೇಕ ರೈ ಹೇಳಿದರು.
ವಿಶ್ರಾಂತ ಕುಲಪತಿ ಹಾಗೂ ತುಳು ವಿದ್ವಾಂಸ ಡಾ. ಚಿನ್ನಪ್ಪಗೌಡ, ಡಾ. ವಾಮನ ನಂದಾವರ ಅವರ ಪುತ್ರಿ ಹೇಮಾಶ್ರೀ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಹಿರಿಯ ವಿದ್ವಾಂಸರಾದ ಡಾ. ತುಕರಾಮ್ ಪೂಜಾರಿ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ.ಜ್ಯೋತಿ ಚೇಳಾಯಾರು, ಭಾಸ್ಕರ ರೈ ಕುಕ್ಕುವಳ್ಳಿ, ಬೆನೆಟ್ ಅಮ್ಮನ್ನ, ಗಣೇಶ್ ಕುದ್ರೋಳಿ, ಕಲ್ಲೂರು ನಾಗೇಶ್ ಮಾತನಾಡಿದರು.
ಗಾಯಕರಾದ ಮೈಮ್ ರಾಮ್ ದಾಸ್, ತೋನ್ಸೆ ಪುಷ್ಕಲ್ ಕುಮಾರ್ ಅವರು ಡಾ.ವಾಮನ ನಂದಾವರರ ಹಾಡುಗಳನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್, ಕೊಂಕಣಿ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರೀಸ್, ತುಳು ಅಕಾಡಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ವಿವಿಧ ಸಾಹ್ಯಿತಿಕ ಸಾಂಸ್ಕ್ರತಿಕ ಸಂಘಟನೆಗಳ ಪ್ರಮುಖರಾದ ವಾಸುದೇವ ಉಚ್ಚಿಲ್, ದಿನಕರ ಉಳ್ಳಾಲ್, ಚಂದ್ರಹಾಸ ಉಳ್ಳಾಲ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ಪ್ರೊ.ಕೃಷ್ಣಮೂರ್ತಿ, ಪರಮಾನಂದ ಸಾಲ್ಯಾನ್, ಜಿತು ನಿಡ್ಲೆ, ಡಾ.ಪ್ರಕಾಶ್ಚಂದ್ರ ಶಿಶಿಲ, ಚಂದ್ರಹಾಸ ಕಣಂತೂರು ಉಪಸ್ಥಿತರಿದ್ದರು.