ಬಂಡವಾಳ ಶಾಹಿಗಳ ರಕ್ಷಣೆಗಾಗಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ: ಸುಧೀರ್ ಕುಮಾರ್ ಮುರೊಳ್ಳಿ ಆರೋಪ

ಉಳ್ಳಾಲ: ದೇಶದ ಯಾವುದೇ ಧರ್ಮದ ಅನುಯಾಯಿಗಳು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಬಯಸಿರ ಲಿಲ್ಲ. ಈ ವಕ್ಫ್ ತಿದ್ದುಪಡಿ ಕಾಯ್ದೆ ಹೀಗೇ ಇರಬೇಕು ಎಂದು ಯಾವ ಧರ್ಮೀಯರೂ ಹೇಳಿರಲಿಲ್ಲ. ಕೇಂದ್ರ ಸರಕಾರಕ್ಕೆ ನೆರಳಾಗಿರುವ ಬಂಡವಾಳಶಾಹಿಗಳ, ಕೈಗಾರಿಕೋದ್ಯಮಿಗಳ ರಕ್ಷಣೆಗಾಗಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸಂಘ ಪರಿವಾರ ಮತ್ತು ಬಿಜೆಪಿ ಸರಕಾರ ಬಯಸಿದೆ ಎಂದು ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಸುಧೀರ್ ಕುಮಾರ್ ಮರೊಳ್ಳಿ ಆರೋಪಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಿದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಳ್ಳಾಲ ತಾಲೂಕು ಸಂಯುಕ್ತ ನಾಗರಿಕ ವೇದಿಕೆ ವತಿಯಿಂದ ಕೆ.ಸಿ. ರೋಡ್ ಜಂಕ್ಷನ್ ಅಲ್ ಮುಬಾರಕ್ ಜುಮಾ ಮಸೀದಿಯ ಬಳಿ ಶುಕ್ರವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಸಂಘಪರಿವಾರ ಮತ್ತು ಬಿಜೆಪಿಯು ಯಾವತ್ತೂ ಕೂಡ ಹಿಂದೂ ಸಮುದಾಯವನ್ನು ಪ್ರತಿನಿಧಿಸುವು ದಿಲ್ಲ. ಅದು ಹಿಂದೂ ಸಮುದಾಯವನ್ನು ಪ್ರತಿನಿಧಿಸುವುದಾದರೆ ದೇಶದ ಸಮನ್ವಯ ತತ್ವಗಳನ್ನು ಪ್ರತಿ ನಿಧಿಸಬೇಕಾಗಿತ್ತು ಎಂದ ಸುಧೀರ್ ಕುಮಾರ್ ಮುರೊಳ್ಳಿ, ಮುಸ್ಲಿಮರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಹೇಳುತ್ತಿ ದ್ದಾರೆ. ಆದರೆ ಅವರು ಈ ಕಾಯ್ದೆಯನ್ನು ಮುಸ್ಲಿಮರ ಹಿತಕ್ಕಾಗಿ ಜಾರಿಗೊಳಿಸಿಲ್ಲ. ಮುಖೇಶ್ ಅಂಬಾನಿ ಯಂತಹ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ಎನ್ನುವುದು ದೇವರ ಆಸ್ತಿಯೇ ಹೊರತು ಸರಕಾರದ್ದಲ್ಲ ಎನ್ನುವುದನ್ನು ಪ್ರಧಾನಿ ಮತ್ತು ಗೃಹ ಸಚಿವರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಆಸ್ತಿ ನಮ್ಮದೆಂದು ಯಾವ ಮುಸಲ್ಮಾನ ಕೂಡ ಹೇಳಿಕೊಂಡಿಲ್ಲ. ಮಠ, ಮಂದಿರಗಳಿಗೆ ಯಾರೇ ಆಸ್ತಿ ದಾನ ಮಾಡಿದರೂ ಅದನ್ನು ಪ್ರಶ್ನೆ ಮಾಡಿದ್ದೂ ಇಲ್ಲ ಎಂದ ಸುಧೀರ್ ಕುಮಾರ್ ಮುರೊಳ್ಳಿ, ದೇವರ ಮೇಲೆ ನಂಬಿಕೆ ಇದ್ದ ವ್ಯಕ್ತಿಗಳು ತನ್ನ ಆಸ್ತಿಯನ್ನು ದೇವರ ಆಸ್ತಿ ಎಂದು ಘೋಷಣೆ ಮಾಡಿ ವಕ್ಫ್ಗೆ ಬಿಟ್ಟು ಕೊಟ್ಟಿದ್ದಾರೆ ಎಂದರು.
ನಮಗೆ ನಂಬಿಕೆ, ಶ್ರದ್ಧೆ ಕೊಟ್ಟಿರುವುದು ಅಂಬೇಡ್ಕರ್ರ ಸಂವಿಧಾನವಾಗಿದೆ. ಕೇಂದ್ರ ಸರಕಾರವು ಇತರ ಸಮುದಾಯಗಳಿಗೆ ನೋವುಂಟು ಮಾಡುವ ಕಾಯ್ದೆ ಜಾರಿಗೊಳಿಸುವ ಉದ್ದೇಶ ಏನು ಎಂದು ಪ್ರಶ್ನಿಸಿದ ಸುಧೀರ್ ಕುಮಾರ್ ಮುರೊಳ್ಳಿ, ಇನ್ನೊಂದು ಸಮುದಾಯದ ಆಸ್ತಿ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರಲ್ಲದೆ, ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಎನ್ಆರ್ಸಿ, ಸಿಎಎ, ಹಲಾಲ್, ಹಿಜಾಬ್ ಈಗ ವಕ್ಫ್ ತಿದ್ದುಪಡಿ ಕಾಯ್ದೆ ಹೀಗೆ ಒಂದೊಂದೇ ಜಾರಿಗೆ ತಂದು ಜನರಿಗೆ ಮೋಸ ಮಾಡುತ್ತಿದೆ. ಇಂತಹ ಕಾಯಿದೆ ನಮಗೆ ಬೇಕಾಗಿಲ್ಲ ಎಂದರು.
ಎಸೆಸ್ಸೆಫ್ ರಾಷ್ಟ್ರೀಯ ನಾಯಕ ಡಾ. ಅಬ್ದುಲ್ ರಶೀದ್ ಝೈನಿ ಮಾತನಾಡಿ ಕೇಂದ್ರ ಸರಕಾರ ಅಲ್ಪ ಸಂಖ್ಯಾತರ ವಿರುದ್ಧ ದಾಳಿಯನ್ನು ತೀವ್ರಗೊಳಿಸಿದೆ. ವಕ್ಫ್ ವಿಚಾರದಲ್ಲಿ ಮಹತ್ತರ ಬದಲಾವಣೆ ತರುವ ಮೂಲಕ ಮುಸ್ಲಿಮರನ್ನು ಮತ್ತೆ ಬೀದಿಗಿಳಿಯುವಂತೆ ಮಾಡಿದೆ. 800 ವರ್ಷಗಳ ಹಿಂದೆ ದೆಹಲಿಯ ಸುಲ್ತಾನರು ಸಾಮ್ರಾಜ್ಯ ಸ್ಥಾಪಿಸಿದ್ದರು. ಈ ಸಂದರ್ಭ ಬಹಳಷ್ಟು ಭೂಮಿಗಳನ್ನು ವಕ್ಫ್ ಮಾಡಿದ್ದರು. ಬಳಿಕ ಫ್ರೆಂಚರು, ಡಚ್ಚರು ಆಳ್ವಿಕೆ ಮಾಡಿದರು. ಆದರೆ ಯಾವುದೇ ಸಮಸ್ಯೆ ಆಗಲಿಲ್ಲ. ಈಗ ಕೇಂದ್ರ ಸರಕಾರ ವಕ್ಫ್ ವಿಚಾರದಲ್ಲಿ ದೇಶಾದ್ಯಂತ ಅಶಾಂತಿ ಸೃಷ್ಟಿಸುತ್ತಿದೆ. ಪ್ರಸಕ್ತ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮುಸ್ಲಿಮರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರಸಕ್ತ ದಿನಗಳಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಕಾನೂನು, ಆಡಳಿತ ಯಂತ್ರವು ಮೌನಕ್ಕೆ ಶರಣಾಗಿವೆ. ಸಂಘ ಪರಿವಾರವು ನಿರಂತರವಾಗಿ ಮಸೀದಿ, ಸಂಘ ಸಂಸ್ಥೆಗಳ ಮುಂದೆ ಘೋಷಣೆ ಕೂಗುತ್ತ ಪರಿಸ್ಥಿತಿ ಹದಗೆಡಿಸುತ್ತಿದೆ ಎಂದರು.
ಎಸ್ವೈಎಸ್ ಮುಖಂಡ ಕೆ.ಪಿ. ಹುಸೈನ್ ಸಅದಿ ದುಆಗೈದರು. ಕೆಸಿ ರೋಡ್ ಮಸೀದಿಯ ಖತೀಬ್ ಮುನೀರ್ ಸಖಾಫಿ ಪ್ರತಿಭಟನಾ ಸಮಾವೇಶವನ್ನು ಉದ್ಘಾಟಿಸಿದರು. ನ್ಯಾಯವಾದಿ ಮುಝಪ್ಫರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಯುಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಯು. ಸಲಾಂ ಉಚ್ಚಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಮುಹಮ್ಮದ್ ಅಲಿ ತುರ್ಕಳಿಕೆ, ಮುಸ್ತಾಕ್ ಹೆನ್ನಾಬೈಲ್, ಯಾಕೂಬ್ ಕಲ್ಲರ್ಪೆ, ಎ.ಕೆ. ಕುಕ್ಕಿಲ, ಸೈಫುಲ್ಲಾ ತಂಳ್ ಮಂಜೇಶ್ವರ, ಅಡ್ವೊಕೇಟ್ ಹನೀಫ್ ಹುದವಿ, ರಿಯಾಝ್ ಕಡಂಬು ಮಾತನಾಡಿದರು.
ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ರಶೀದ್ ಹಾಜಿ, ಮಾಜಿ ಮೇಯರ್ ಕೆ. ಅಶ್ರಫ್ ಮತ್ತಿತರರು ಉಪಸ್ಥಿತ ರಿದ್ದರು. ಸಂಯುಕ್ತ ನಾಗರಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ ಸ್ವಾಗತಿಸಿದರು.

