ಮಂಗಳೂರು: ವಿವಾಹದ ಮುನ್ನಾ ದಿನ ವಧು ಕಾಣೆ
Update: 2025-04-16 21:20 IST

ಮಂಗಳೂರು, ಎ.16: ವಿವಾಹದ ಮುನ್ನಾ ದಿನ ವಧು ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಾರದ ನಾರಾಯಣ ಎಂಬವರ ಪುತ್ರಿ ಪಲ್ಲವಿ(22) ಕಾಣೆಯಾದ ವಧು. ಈಕೆಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿತ್ತು. ಅಲ್ಲದೆ ಎ.16ರಂದು ವಿವಾಹ ನಿಗದಿಯಾಗಿತ್ತು. ಆದರೆ ಎ.15ರಂದು ಮಧ್ಯಾಹ್ನ ಪಲ್ಲವಿ ಮೆಹಂದಿ ಹಾಕಿಸಿಕೊಳ್ಳಲು ಬ್ಯೂಟಿಪಾರ್ಲರ್ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬಳಿಕ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಪಲ್ಲವಿಯ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
5 ಅಡಿ ಎತ್ತರದ, ಬಿಳಿ ಮೈಬಣ್ಣದ, ಸಾಧಾರಣ ಶರೀರದ ಈಕೆ ಕನ್ನಡ, ತುಳು, ಇಂಗ್ಲಿಷ್, ಹಿಂದಿ ಮಾತನಾಡುತ್ತಾಳೆ. ಕಾಣೆಯಾದ ದಿನ ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದಳು. ಈಕೆಯ ಸುಳಿವು ಸಿಕ್ಕವರು ಪಾಂಡೇಶ್ವರ ಠಾಣೆ (0824- 2220518) ಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.