ಸಚ್ಚಾರಿತ್ರ್ಯ ಬೆಳೆಸುವುದು ಸಾಹಿತ್ಯದ ಉದ್ದೇಶವಾಗಲಿ: ಮಟ್ಟಾರ ವಿಟ್ಠಲ ಕಿಣಿ ಆಶಯ

Update: 2025-04-17 20:29 IST
ಸಚ್ಚಾರಿತ್ರ್ಯ ಬೆಳೆಸುವುದು ಸಾಹಿತ್ಯದ ಉದ್ದೇಶವಾಗಲಿ: ಮಟ್ಟಾರ ವಿಟ್ಠಲ ಕಿಣಿ ಆಶಯ
  • whatsapp icon

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರೃ ಹೋರಾಟಗಾರ, ಹಿರಿಯ ಸಾಹಿತಿ ಮಟ್ಟಾರ ವಿಟ್ಠಲ ಕಿಣಿ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಗುರುವಾರ ನಗರದ ಅಳಕೆಯಲ್ಲಿರುವ ಸ್ವಗೃಹದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮಟ್ಟಾರ ವಿಟ್ಠಲ ಕಿಣಿ ಮಾತನಾಡಿ ‘ಯುವ ಸಮುದಾಯದಲ್ಲಿ ಸಚ್ಚಾರಿತ್ರ್ಯಮತ್ತು ದೇಶಾಭಿಮಾನ ರೂಪಿಸಿ ಬೆಳೆಸುವುದು ಕೂಡಾ ಭಾರತೀಯ ಸಾಹಿತ್ಯದ ಉದ್ದೇಶವಾಗಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ದೇಶದ ಉನ್ನತಿ

ಸಾಧ್ಯ. ಸಾವಿರಾರು ದೇಶ ಭಕ್ತರ ಬಲಿದಾನದಿಂದ ದೇಶ ಸ್ವಾತಂತ್ರೃ ಪಡೆದಿದೆ ಎನ್ನುವುದು ಸದಾ ನಮ್ಮ ಸ್ಮರಣೆಯಲ್ಲಿರಬೇಕು ಎಂದರು.

ಸನ್ಮಾನ ನೆರವೇರಿಸಿದ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ ‘ ವಿದ್ಯಾರ್ಥಿ ದೆಸೆಯಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿ ಬಳಿಕ ಗೋವಾ ವಿಮೋಚನೆ ಹೋರಾಟದಲ್ಲಿ ಭಾಗವಹಿಸಿದ ಮಟ್ಟಾರ ವಿಟ್ಠಲ ಕಿಣಿ ಅವರ ಅಪ್ರತಿಮ ರಾಷ್ಟ್ರಭಕ್ತಿ, ಸಾಹಿತ್ಯ ಸೇವೆ ಸಮಾಜಕ್ಕೆ ಸದಾ ಪ್ರೇರಣೆಯಾಗಿದೆ ಎಂದರು.

ಹಿರಿಯ ಪರ್ತಕರ್ತ ಕೆ.ಆನಂದ ಶೆಟ್ಟಿ, ಅಭಾಸಾಪ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿಯ ಖಜಾಂಜಿ ಭಾಸ್ಕರ ರೈ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ವಂದಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News