ಎಳತ್ತೂರಿನಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ಜಮೀನಿನಲ್ಲಿ ತ್ಯಾಜ್ಯ ಸುರಿಯುವ ಹುನ್ನಾರ: ಜಿಲ್ಲಾಧಿಕಾರಿಗೆ ದೂರು

ಮಂಗಳೂರು: ಕಿನ್ನಿಗೋಳಿ ನಗರ ಪಂಚಾಯತ್ ವ್ಯಾಪ್ತಿಯ ಎಳತ್ತೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವರಿಗೆ ನೀಡಲಾದ ಜಮೀನಿನಲ್ಲಿ ಕಿನ್ನಿಗೋಳಿ ಮತ್ತು ಮುಲ್ಕಿ ನಗರ ಪಂಚಾಯತ್ ತ್ಯಾಜ್ಯ ಸುರಿಯಲು ಹುನ್ನಾರ ನಡೆಯುತ್ತಿದ್ದು, ಇಂತಹ ಪ್ರಯತ್ನವನ್ನು ತಡೆಯುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಚಂದ್ರ ಕುಮಾರ್ ನೇತೃತ್ವದ ನಿಯೋಗವು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಸಮಿತಿಯ ಪದಾಧಿಕಾರಿಗಳಾದ ಗಂಗಾಧರ ಮರಾಠಿ, ಸರೀತಾ ಶೆಟ್ಟಿ, ವನಿತಾ , ಗುಲಾಬಿ, ವೀಣಾ, ಶಕುಂತಲಾ, ವೇದಾ, ಲೀನಾ ಡಿ ಸೋಜ , ಲೋಲಾಕ್ಷಿ ಮತ್ತು ಸೂರ್ಯಪ್ರಕಾಶ್ ಇದ್ದರು.
ಎಳತ್ತೂರು ಗ್ರಾಮದ ಸರ್ವೇ ನಂಬ್ರ 87ರಲ್ಲಿ ತ್ಯಾಜ್ಯ ಸುರಿಯುವುದರ ವಿರುದ್ಧ ಜಿಲ್ಲಾ ಗ್ರಾಹಕರ ಸಂಘಟನೆಯು 2004, 2005 ಮತ್ತು 2006ರಲ್ಲಿ ಪ್ರತಿಭಟನೆ ನಡೆಸಿದ ಕಾರಣದಿಂದಾಗಿ ದ.ಕ. ಜಿಲ್ಲಾಧಿಕಾರಿ ಅವರು ತಡೆ ನೀಡಿದ್ದರು ಎಂದು ನಿಯೋಗವು ಅಪರ ಜಿಲ್ಲಾಧಿಕಾರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದೆ.
ಎರಡೂ ನಗರ ಪಂಚಾಯತ್ಗಳ ತ್ಯಾಜ್ಯವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಿರುವ ಜಮೀನಿಗೆ ತಂದು ಸುರಿಯುವುದರಿಂದ ಪರಸರ ಮತ್ತು ಅಲ್ಲಿರುವ ಕುಡಿಯುವ ನೀರಿನ ಕೆರೆ ಮಲೀನವಾಗುವ ಸಾಧ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.